ಉಡುಪಿ, ಮೇ. 24 (DaijiworldNews/AA): ಮಣಿಪಾಲದ ಆರ್ಎಸ್ಬಿ ಸರ್ಕಲ್ ಬಳಿ ಕೆಲವು ಕಾಮಗಾರಿಗಳಿಗಾಗಿ ಅಗೆದು ಹಾಕಲಾಗಿದ್ದ ರಸ್ತೆಯ ಒಂದು ಭಾಗವು ಕಳೆದ ಹಲವಾರು ವಾರಗಳಿಂದ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಭಾರೀ ಅಪಾಯವನ್ನು ತಂದೊಡ್ಡುತ್ತಿತ್ತು. ಇದು ಸರಣಿ ಅಪಘಾತಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಣಾಂತಿಕವಾಗಿ ಪರಿಣಮಿಸಿತ್ತು.







ಅಗೆದ ರಸ್ತೆಯನ್ನು ಸರಿಯಾಗಿ ದುರಸ್ತಿ ಮಾಡದೆ ಹಾಗೆಯೇ ಬಿಡಲಾಗಿತ್ತು. ಇದರಿಂದಾಗಿ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿ, ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದಿದ್ದರು. ಪ್ರತ್ಯೇಕ ಅಪಘಾತಗಳಲ್ಲಿ ಹಲವು ಸವಾರರು ತೀವ್ರವಾಗಿ ಗಾಯಗೊಂಡಿದ್ದರು.
ಮೇ 23ರಂದು ಬೆಳಗ್ಗೆ ಈ ರಸ್ತೆಯ ಅಪಾಯಕಾರಿ ಸ್ಥಿತಿಯ ಕುರಿತು ದಾಯ್ಜಿವರ್ಲ್ಡ್ ಮಾಧ್ಯಮ ವರದಿ ಪ್ರಕಟಿಸಿ, ಸಂಬಂಧಪಟ್ಟವರ ಗಮನ ಸೆಳೆದಿತ್ತು. ಈ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಅದೇ ದಿನ ಸಂಜೆಯ ವೇಳೆಗೆ ರಸ್ತೆಯ ಹೊಂಡವಿದ್ದ ಜಾಗಕ್ಕೆ ಡಾಂಬರು ಹಾಕಿ ದುರಸ್ತಿ ಮಾಡಿದ್ದಾರೆ.
ಸದ್ಯ ರಸ್ತೆಗೆ ಡಾಂಬರು ತೇಪೆ ಕಾರ್ಯ ನಡೆಸಿ, ರಸ್ತೆಯನ್ನು ಸರಿಪಡಿಸಲಾಗಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಾದರೂ ನಿರ್ವಹಣಾ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಅಗೆದಾಗ, ಸಾರ್ವಜನಿಕರಿಗೆ ತೊಂದರೆಯಾಗದಂತೆ, ಅಪಘಾತಗಳಾಗದಂತೆ ತಕ್ಷಣವೇ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.