ಕುಂದಾಪುರ, ಸೆ. 06 (DaijiworldNews/AA): ಮೀನು ತುಂಬಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ರಸ್ತೆ ಬದಿಯ ಟೆಂಟ್ಗಳಲ್ಲಿ ವಾಸಿಸುತ್ತಿದ್ದ ವಲಸೆ ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಂಕ್ಷನ್ ಸಮೀಪ ಶನಿವಾರ ಸಂಭವಿಸಿದೆ.


ಬೈಂದೂರಿನಿಂದ ಕುಂದಾಪುರದತ್ತ ತೆರಳುತ್ತಿದ್ದ ಮೀನು ಸಾಗಾಟದ ಲಾರಿ ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ ಮತ್ತೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೀನು ತುಂಬಿದ್ದ ಲಾರಿ ರಸ್ತೆಯಿಂದ ಪಕ್ಕಕ್ಕೆ ಚಲಿಸಿ, ರಸ್ತೆ ಬದಿಯ ಚರಂಡಿಗೆ ಮಗುಚಿ ಬಿದ್ದಿದೆ. ಈ ಚರಂಡಿಯ ಪಕ್ಕದಲ್ಲೇ ವಲಸೆ ಕಾರ್ಮಿಕರು ಟೆಂಟ್ಗಳಲ್ಲಿ ವಾಸಿಸುತ್ತಿದ್ದರು.
ರಸ್ತೆಯ ಪಕ್ಕದಲ್ಲಿದ್ದ ಚರಂಡಿಗೆ ಲಾರಿ ಮಗುಚಿ ಬಿದ್ದ ಪರಿಣಾಮ ಟೆಂಟ್ಗಳಲ್ಲಿ ವಾಸಿಸುತ್ತಿದ್ದ ಕಾರ್ಮಿಕರ ಪ್ರಾಣ ಉಳಿಸಿದೆ. ಒಂದು ವೇಳೆ ಚರಂಡಿ ಇಲ್ಲದಿದ್ದರೆ ನೇರವಾಗಿ ಟೆಂಟ್ಗಳ ಮೇಲೆ ಬಿದ್ದು, ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.
ಅಪಘಾತ ಸಂಭವಿಸುವ ಕೆಲವೇ ಕ್ಷಣಗಳ ಮೊದಲು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವ ಗುತ್ತಿಗೆ ಸಂಸ್ಥೆಯ ವಾಹನವು ಕಾರ್ಮಿಕರನ್ನು ಇದೇ ಸ್ಥಳದಲ್ಲಿ ಇಳಿಸಿ ಹೋಗಿತ್ತು ಎನ್ನಲಾಗಿದೆ. ಅದೃಷ್ಟವಶಾತ್, ಎಲ್ಲಾ ಕಾರ್ಮಿಕರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.