ಮಂಗಳೂರು, ಸೆ. 06 (DaijiworldNews/AA): ಕೊಂಕಣಿ ವಾರಪತ್ರಿಕೆ 'ರಾಕ್ಣೊ' ವತಿಯಿಂದ 'ರಾಕ್ಣೊ ಪ್ರಶಸ್ತಿ 2026' ಪ್ರದಾನ, ಪುಸ್ತಕ ಬಿಡುಗಡೆ ಹಾಗೂ ಕೊಂಕಣಿ ಬರಹಗಾರರು ಮತ್ತು ಓದುಗರ ಸಮಾಗಮ ಕಾರ್ಯಕ್ರಮವು ಭಾನುವಾರ ದಂದು ಬೆಜೈ ಚರ್ಚ್ ಹಾಲ್ನಲ್ಲಿ ಜರುಗಿತು.

ಈ ಕಾರ್ಯಕ್ರಮವು ಸಾಹಿತ್ಯಿಕ ಸಾಧನೆಯನ್ನು ಆಚರಿಸುವುದರ ಜೊತೆಗೆ ದೈನಂದಿನ ಜೀವನದಲ್ಲಿ ಕೊಂಕಣಿ ಭಾಷೆಯನ್ನು ಉಳಿಸುವ ಮತ್ತು ಉತ್ತೇಜಿಸುವ ತುರ್ತು ಅಗತ್ಯವನ್ನು ಒತ್ತಿಹೇಳಿತು. ಕೊಂಕಣಿ ಭಾಷೆ, ಸಾಹಿತ್ಯ ಹಾಗೂ ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಈ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.
ಕೊಂಕಣಿ ವಿದ್ವಾಂಸ ವಂ. ಫಾದರ್ ಜೇಸನ್ ಲೋಬೊ ಎಸ್ಡಿಬಿ ಅವರ 'ಕ್ರಿಸ್ತ ಪುರಾಣ' ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಸಾಂಪ್ರದಾಯಿಕ ಸ್ವಾಗತ ನೃತ್ಯ ಜರುಗಿತು. 'ರಾಕ್ಣೊ' ಸಂಪಾದಕರಾದ ವಂ. ಫಾದರ್ ರೂಪೇಶ್ ಮಾಡ್ತಾ ಅವರು ಗಣ್ಯರನ್ನು ಹಾಗೂ ಸಭಿಕರನ್ನು ಅಧಿಕೃತವಾಗಿ ಸ್ವಾಗತಿಸಿದರು.
ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತಿ ಪೂಜ್ಯ. ಡಾ. ಪೀಟರ್ ಪೌಲ್ ಸಲ್ಡಾನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬಿಷಪ್ ಪೀಟರ್ ಪೌಲ್ ಸಲ್ಡಾನಾ ಅವರು, ಕೊಂಕಣಿಯನ್ನು 'ಹೃದಯದ ಅತ್ಯಂತ ಪ್ರೀತಿಯ ಭಾಷೆ' ಎಂದು ಬಣ್ಣಿಸಿದರು ಹಾಗೂ ಅದರ ಬೆಳವಣಿಗೆಯನ್ನು ನಿರಂತರವಾಗಿ ಪೋಷಿಸುತ್ತಿರುವ 'ರಾಕ್ಣೊ' ಪತ್ರಿಕೆಯನ್ನು ಶ್ಲಾಘಿಸಿದರು.
ತಮ್ಮದೇ ಸಾಹಿತ್ಯಿಕ ಪಯಣವನ್ನು ಮೆಲುಕು ಹಾಕಿದ ಅವರು, ತಾನು ಕೊಂಕಣಿಯಲ್ಲಿ ಬರೆಯಲು ಕಲಿತಿದ್ದೇ ಈ ಪತ್ರಿಕೆಯ ಮೂಲಕ. ಸಂವಹನದಲ್ಲಿ ಕೊಂಕಣಿಯನ್ನು ಕೈಬಿಡುವುದರಿಂದ ಸಮುದಾಯವು ತನ್ನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕಳೆದುಕೊಳ್ಳುವ ಅಪಾಯವಿದೆ. ದೈನಂದಿನ ಸಂಭಾಷಣೆಗಳಲ್ಲಿ ಕೊಂಕಣಿ ಸಂಖ್ಯೆಗಳು ಮತ್ತು ಶಬ್ದಕೋಶಗಳ ಬಳಕೆಗೆ ಒತ್ತು ನೀಡುವ ಮೂಲಕ ಯುವಕರು ಮತ್ತು ಮಕ್ಕಳಲ್ಲಿ ಮಾತನಾಡುವ ಭಾಷೆಯನ್ನು ಸಕ್ರಿಯವಾಗಿ ಉತ್ತೇಜಿಸಲು ಅವರು 'ರಾಕ್ಣೊ'ಗೆ ಕರೆ ನೀಡಿದರು.
ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಜೆರ್ರಿ ನಿಡ್ಡೋಡಿ ಅವರಿಗೆ 'ವರ್ಷದ ಅತ್ಯುತ್ತಮ ಬರಹಗಾರ 2026' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಡಾ. ಎಡ್ವರ್ಡ್ ನಜರೆತ್ ಅವರು ಪ್ರಶಸ್ತಿ ಪುರಸ್ಕೃತರ ಕೊಡುಗೆಗಳನ್ನು ಶ್ಲಾಘಿಸಿ ಅಭಿನಂದನಾ ಭಾಷಣ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ನಿಡ್ಡೋಡಿ, "ಕಳೆದ 25 ವರ್ಷಗಳಿಗೂ ಹೆಚ್ಚು ಕಾಲ ನಾನು 'ರಾಕ್ಣೊ'ಗಾಗಿ ಬರೆದಿದ್ದೇನೆ. ಅದು ಯಾವಾಗಲೂ ನನ್ನನ್ನು ಬೆಂಬಲಿಸಿದೆ ಮತ್ತು ನನ್ನ ಮಾತೃಭಾಷೆಯನ್ನು ಬೆಳೆಸಲು ವೇದಿಕೆಯನ್ನು ನೀಡಿದೆ. ಕೊಂಕಣಿ ಚಿರಕಾಲ ಉಳಿಯಲಿ" ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಇದೇ ವೇಳೆ ಆಂಜೆಲೊರ್ ಚರ್ಚ್ ನ 'ಅಂಜೆಲೊರ್ಚೊ ಆಂಜ್' ಪತ್ರಿಕೆಗೆ 'ವರ್ಷದ ಅತ್ಯುತ್ತಮ ಧರ್ಮಕೇಂದ್ರದ ನಿಯತಕಾಲಿಕೆ 2026' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಿಕೆಯ ಸಂಪಾದಕ ರೋಶನ್ ಪತ್ರಾವೊ ಅವರನ್ನು ಈ ಸಂದರ್ಭದಲ್ಲಿ ಅಧಿಕೃತವಾಗಿ ಸನ್ಮಾನಿಸಲಾಯಿತು. ಫ್ರಾನ್ಸಿಸ್ ಡಿಕುನ್ಹಾ ಅವರು ಅಭಿನಂದನಾ ನುಡಿಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಮ್ ಸ್ಟ್ಯಾನಿ ಆಲ್ವಾರಿಸ್, ಎಲ್ಲಾ ಕೊಂಕಣಿ ಬರಹಗಾರರು ಮತ್ತು ಧರ್ಮಕೇಂದ್ರಗಳ ನಿಯತಕಾಲಿಕೆಗಳ ಸಂಪಾದಕರಿಗೆ ವಿಶೇಷ ಮನವಿ ಮಾಡಿದರು. ಕನ್ನಡ ಲಿಪಿಯಲ್ಲಿರುವ ಈ ಪ್ರದೇಶದ ಸಾಹಿತ್ಯಿಕ ಕೊಡುಗೆಗಳನ್ನು ಸರಿಯಾಗಿ ದಾಖಲಿಸಿ ಸಂರಕ್ಷಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ತಮ್ಮ ಪ್ರಕಟಣೆಗಳ ಪ್ರತಿಗಳನ್ನು ನಿರಂತರವಾಗಿ ಅಕಾಡೆಮಿಗೆ ಕಳುಹಿಸುವಂತೆ ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ, ಬುಡ್ಕುಲೊ ಮೀಡಿಯಾದ ಡೊನಾಲ್ಡ್ ಪಿರೇರಾ ಅವರ ಚೊಚ್ಚಲ ಸಣ್ಣ ಕಥೆಗಳ ಸಂಕಲನ 'ಮೊಗಾಚಿ ಸುನಾಮಿ' ಪುಸ್ತಕವನ್ನು ಬಿಷಪ್ ಬಿಡುಗಡೆಗೊಳಿಸಿದರು. ಪುಸ್ತಕ ಬಿಡುಗಡೆಯ ಬಳಿಕ ಮಾತನಾಡಿದ ಪಿರೇರಾ, ಕಲಿಯಲು, ಬೆಳೆಯಲು ಮತ್ತು ಸಮಕಾಲೀನ ವಿಶ್ಲೇಷಣಾತ್ಮಕ ಕೊಂಕಣಿ ಬರಹಗಾರನಾಗಿ ಗುರುತಿಸಿಕೊಳ್ಳಲು 'ರಾಕ್ಣೊ' ತಮಗೆ ಬುನಾದಿ ಒದಗಿಸಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ನಂತರ, ಕಾರ್ಯಕ್ರಮದಲ್ಲಿ 'ರಾಕ್ಣೊ'ದ ಮಾಜಿ ಸಂಪಾದಕ ಹಾಗೂ ಸಂಪನ್ಮೂಲ ವ್ಯಕ್ತಿ ವಂ. ಫಾದರ್ ವಲೇರಿಯನ್ ಫೆರ್ನಾಂಡಿಸ್ ನೇತೃತ್ವದಲ್ಲಿ ಕೊಂಕಣಿ ಭಾಷಾ ತರಬೇತಿ ಶಿಬಿರವೂ ನಡೆಯಿತು. ಅವರ ಅಧಿವೇಶನವು ಕೊಂಕಣಿ ಸಂಖ್ಯೆಗಳು, ಲಿಂಗ, ವ್ಯಾಕರಣ ಮತ್ತು ಶಬ್ದಕೋಶದ ಬಗ್ಗೆ ಆಳವಾದ ಮಾರ್ಗದರ್ಶನ ನೀಡಿತು. ಅಧಿವೇಶನದ ಮೊದಲು, ಅವರ ಸಮರ್ಪಿತ ಸೇವೆಯನ್ನು ಗುರುತಿಸಿ ಗಣ್ಯರು ವಂ. ಫಾದರ್ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಿದರು.
ವೇದಿಕೆಯಲ್ಲಿ ಬಿಜೈ ಚರ್ಚ್ ನ ಧರ್ಮಗುರು ವಂ. ಫಾದರ್ ಸ್ಟ್ಯಾನಿ ಪಿರೇರಾ, ಉಪಾಧ್ಯಕ್ಷ ನಿರ್ಮಲ್ ಡಿಸೋಜಾ ಮತ್ತು ಕಾರ್ಯದರ್ಶಿ ಅವಿತಾ ಪಿಂಟೊ ಉಪಸ್ಥಿತರಿದ್ದರು.
ಬಿಜೈ ಚರ್ಚ್ ಸದಸ್ಯರ ಸಹಯೋಗದೊಂದಿಗೆ 'ರಾಕ್ಣೊ' ಸಂಪಾದಕೀಯ ಮಂಡಳಿಯು ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿತ್ತು. ಬಿಜೈ ಧರ್ಮಕೇಂದ್ರದ ಆಯೋಗಗಳ ಸಂಯೋಜಕ ಹಾಗೂ 'ಬಿಜಯ್ಚೊ ಕಳೊ' ಪ್ಯಾರಿಷ್ ಬುಲೆಟಿನ್ ಸಂಪಾದಕ ಗಾಡ್ವಿನ್ ಪಿಂಟೊ ವಂದಿಸಿದರು. ತಾರಾ ಲವಿ ಗಂಜಿಮಠ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಪ್ರಮೋದ್ ರೊಡ್ರಿಗಸ್ ಹಾಗು ಫಾ. ಗ್ರೇಶನ್ ಅಲ್ವಾರಿಸ್ ಸಪಕಾರ ನೀಡಿದರು.