ಮಂಗಳೂರು ಜ 16: ನಗರದಲ್ಲಿ ವಸತಿ ರಹಿತ ಬಡವರಿಗೆ ಇದೇ ಮೊದಲ ಬಾರಿಗೆ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಿಕೊಡಲು ಮಹಾನಗರಪಾಲಿಕೆ ಮುಂದಾಗಿದ್ದು, ಇದಕ್ಕಾಗಿ ಜ 16 ರ ಮಂಗಳವಾರ ನಗರದ ಪುರಭವನದಲ್ಲಿ ಫಲಾನುಭವಿಗಳಿಗೆ ಸಾರ್ವಜನಿಕರ ಸಮ್ಮುಖದಲ್ಲೇ ಲಾಟರಿ ಎತ್ತುವ ಮೂಲಕ ಪ್ಲಾಟ್ ಹಂಚಿಕೆ ಕಾರ್ಯ ನಡೆಯಿತು.



ಹಲವು ವರ್ಷಗಳ ಬಳಿಕ ನಗರ ಮಂಗಳೂರು ಮಹಾನಗರದಲ್ಲಿ ಬಡವರಿಗೆ ಬೃಹತ್ ಸಂಖ್ಯೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಜಾರಿಗೆ ಬರುತ್ತಿದೆ. ನಗರದಲ್ಲಿ ಮನೆಗಳಿಗಾಗಿ ವಸತಿ ರಹಿತರಿಂದ ಮನೆಗಳಿಗಾಗಿ ಸಾಕಷ್ಟು ಬೇಡಿಕೆಯಿದ್ದು, ನಗರ ವ್ಯಾಪ್ತಿಯಲ್ಲಿ ಜಾಗದ ಸಮಸ್ಯೆಯಿಂದ ವಸತಿ ಯೋಜನೆಗೆ ತೀವ್ರ ಅಡ್ಡಿಯಾಗಿತ್ತು. ಆದರೆ ಅಪಾರ್ಟ್ಮೆಂಟ್ಗಳ ಮಾದರಿಯಲ್ಲಿ ಮನೆ ನಿರ್ಮಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮನೆ ನಿರ್ಮಿಸಬಹುದಲ್ಲದೇ, ಜಾಗದ ಸಮಸ್ಯೆಗೂ ಪರಿಹಾರ ದೊರಕುವುದನ್ನು ಮನಗಂಡು ಮಂಗಳೂರು ಮಹಾನಗರಪಾಲಿಕೆ ಅಪಾರ್ಟ್ಮೆಂಟ್ಗಳ ಮಾದರಿಯಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆ ಪ್ರಸ್ತಾವನೆಯನ್ನು ಸರಕಾರದ ಮುಂದಿಟ್ಟಿತ್ತು. ಇದಕ್ಕೆ ಸರಕಾರದ ಅನುಮೋದನೆಯೂ ದೊರಕಿದ್ದು, ಮಹಾನಗರದಲ್ಲಿ ವಸತಿ ರಹಿತ ಬಡವರ ಸ್ವಂತ ಮನೆಹೊಂದುವ ದೀರ್ಘಕಾಲದ ಕನಸು ಈಡೇರುವ ಹಂತಕ್ಕೆ ಬಂದಿದೆ. ಅದೂ ಕೂಡಾ ಫ್ಲಾಟ್ಗಳೆಂದರೆ ಶ್ರೀಮಂತರಿಗೆ ಮಾತ್ರ ಎಂಬ ಪರಿಕ್ಪಲನೆಯ ಈ ಕಾಲದಲ್ಲಿ ಬಡವರೂ ಫ್ಲಾಟ್ನ ಮಾಲಕರಾಗುತ್ತಿದ್ದಾರೆ.
ಈ ಯೋಜನೆಯ ಮೊದಲ ಹಂತವಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ನಗರಾಶ್ರಯ ಸಮಿತಿ ಆಶ್ರಯದಲ್ಲಿ ಶಕ್ತಿನಗರ ಸಮೀಪದ ರಾಜೀವನಗರದ 10 ಎಕರೆ ಪ್ರದೇಶದಲ್ಲಿ ಜಿ+3 ಮಾದರಿಯಲ್ಲಿ( ನೆಲಮಹಡಿ ಹಾಗೂ 3 ಮಹಡಿಗಳ ಅಪಾರ್ಟ್ಮೆಂಟ್) ಸುಮಾರು 930 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಮೋದನೆ ನೀಡಿದೆ.
ಪ್ರತಿಯೊಂದು ಫ್ಲಾಟ್ನ ನಿರ್ಮಾಣ ವೆಚ್ಚ ರೂ. 5 ಲಕ್ಷಗಳಾಗಿದ್ದು, ಈ ಯೋಜನೆಗೆ ಅವಶ್ಯವಿರುವ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರಕಾರ, ಮಹಾನಗರಪಾಲಿಕೆ ನಿಧಿ, ಫಲಾನುಭವಿಗಳ ವಂತಿಗೆ ಹಾಗೂ ಫಲಾನುಭವಿಗಳ ಬ್ಯಾಂಕ್ ಸಾಲದಿಂದ ಹೊಂದಿಸಲಾಗುತ್ತದೆ. ಫಲಾನುಭವಿಗಳು ಬ್ಯಾಂಕ್ ಸಾಲ ಪಡೆಯಲು ಅವರಿಗೆ ಹಂಚಿಕೆ ಮಾಡುವ ನಿರ್ದಿಷ್ಟ ಫ್ಲಾಟ್ ಸಂಖ್ಯೆ ಅಗತ್ಯವಾಗಿ ಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಿಂದ ನಗರಾಶ್ರಯ ಸಮಿತಿ ಆಶ್ರಯದಲ್ಲಿ ಈಗಾಗಲೇ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಲಾಟರಿ ಮೂಲಕ ಫ್ಲಾಟ್ಗಳನ್ನು ಆಯ್ಕೆ ಮಾಡಿ, ಹಂಚಿಕೆ ಮಾಡಲಾಗುತ್ತಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ: ಇದೇ ಮಾದರಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಮಹಾನಗರಪಾಲಿಕೆ ವ್ಯಾಪ್ತಿಯ ಬಡವರಿಗೂ 792 ಫ್ಲಾಟ್ಗಳನ್ನು ಜಿ+3 ಮಾದರಿಯಲ್ಲಿ ನಿರ್ಮಿಸಿಕೊಡುವ ಯೋಜನೆಯು ಅಂತಿಮ ಹಂತದಲ್ಲಿದ್ದು, ಶೀಘ್ರವೇ ಫಲಾನುಭವಿಗಳಿಗೆ ಲಾಟರಿ ಮೂಲಕ ಫ್ಲಾಟ್ ಸಂಖ್ಯೆಗಳ ಹಂಚಿಕೆಯಾಗಲಿದೆ. ಸುರತ್ಕಲ್ ಇಡ್ಯಾ ಗ್ರಾಮದಲ್ಲಿ ಈ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ ಫಲಾನುಭವಿಗಳ ಆಯ್ಕೆಯಾಗಿದೆ.
ಪ್ಲಾಟ್ ಹಂಚಿಕೆ ಕಾರ್ಯಕ್ರಮದಲ್ಲಿ, ಶಾಸಕ ಜೆ.ಆರ್ ಲೋಬೋ , ವಿಧಾನ ಪರಿಷತ್ ಮುಖ್ಯ ಸಚೇತಕ, ಐವನ್ ಡಿ ಸೋಜಾ, ಮೇಯರ್ ಕವಿತಾ ಸನಿಲ್ ಮುಂತಾದ ಗಣ್ಯರು ಉಪಸ್ಥಿತರಿದ್ದರು