ಬೆಳ್ತಂಗಡಿ, ಜ 8 (Daijiworld News/MB) : ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳಿಗೆ ಖಚಿತ ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿ ಆನೆ ದಂತ ಸಾಗಿಸುತ್ತಿದ್ದಆರೋಪಿಗಳ ಸಹಿತ ಎರಡು ದಂತ ವಶ ಪಡಿಸಿದ ಘಟನೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪುದುವೆಟ್ಟು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಆರೋಪಿಗಳನ್ನು ಮಡಿಕೇರಿಯ ಹೆರವನಾಡು ಗ್ರಾಮದ ಅಪ್ಪಂಗಳ ನಿವಾಸಿ ದಿನೇಶ ಪಿ.ಕೆ. (33) ಹಾಗೂ ಸಕಲೇಶಪುರ ತಾಲೂಕಿನ ನಡಹಳ್ಳಿ ಗ್ರಾಮ ಕುಂಬರಡಿ ನಿವಾಸಿ ಕುಮಾರ.ವಿ (37) ಎಂದು ಗುರುತಿಸಲಾಗಿದ್ದು ಎರಡು ಆನೆ ದಂತ ಮತ್ತು ಆಮ್ನಿ ಕಾರನ್ನು ವಶಕ್ಕೆ ಪಡೆದಿದ್ದು ದಂತಗಳ ಅಂದಾಜು ಮೌಲ್ಯ 30 ಲಕ್ಷ ರೂ ಆಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಮಾಡಲಾಗಿದೆ.
ಮಂಗಳವಾರ ಸಂಜೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪುತ್ತೂರು ಅರಣ್ಯ ಸಂಚಾರಿ ದಳದ ಸಿಬಂದಿ ಸುಂದರ್ ಶೆಟ್ಟಿ, ವಿಜಯ ಸುವರ್ಣ, ಉದಯ, ರಾಧಕೃಷ್ಣಾರವರು ದಾಳಿ ನಡೆಸಿದ್ದಾರೆ.
ಕಳೆದ ಸೆಪ್ಟೆಂಬರ್ 18 ರಂದು ಉಜಿರೆ ಸುರ್ಯ ಸಮೀಪ ಮನೆಯೊಂದರ ಶೆಡ್ ನಲ್ಲಿ ಇರಿಸಲಾಗಿದ್ದ 51.730 ಕೆ.ಜಿ. ತೂಕದ 10 ಆನೆದಂತವನ್ನು ವಶಪಡಿಸಿ ಮೂವರು ಆರೋಪಿಗಳನ್ನು ಮಂಗಳೂರು ವಿಶೇಷ ಅರಣ್ಯ ಸಂಚಾರಿ ದಳ ಬಂಧನ ಮಾಡಿದ್ದರು.
ಇದೀಗ ಮತ್ತೊಂದು ಪ್ರಕರಣ ದಾಖಲಾಗಿದ್ದು ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ತನಿಖೆ ಚುರುಕುಗೊಳಿಸಿದ್ದಾರೆ.