ಮಂಗಳೂರು, ಜ.12 (Daijiworld News/MB) : ಜನರು ಕೇಳದ, ಬಯಸದ ಸಿಎಎ ಜಾರಿಗೆ ತಂದು ಮೋದಿ ಸರ್ಕಾರಕ್ಕೆ ಇಲ್ಲಿನ ಜನರನ್ನು ಓಡಿಸಲು ಸಾಧ್ಯವಿಲ್ಲ. ಬಾಬರಿ ಮಸೀದಿ ತೀರ್ಪು ಬಂದಾಗ ನ್ಯಾಯಾಲಯ ತೀರ್ಪುಗೆ ಗೌರವ ನೀಡಿದ್ದೇವೆ. ಆದರೆ ಮೋದಿ ಜನ ವಿರೋಧಿ ಕಾಯ್ದೆ ತಂದರೆ ಅದನ್ನು ಒಪ್ಪಿಕೊಳ್ಳಲು ಯಾರು ತಯಾರಿಲ್ಲ. ಇದು ನಮ್ಮ ದೇಶಕ್ಕೆ ಮಾರಕ ಎಂದು ನ್ಯಾಯವಾದಿ ಸಾಮಾಜಿಕ ಹೋರಾಟಗಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.


ಅವರು ಪೌರತ್ವ ಸಂರಕ್ಷಣಾ ವೇದಿಕೆ ಮಲ್ಲೂರು ಇದರ ಆಶ್ರಯದಲ್ಲಿ ಸಿಎಎ,ಎನ್. ಆರ್. ಸಿ,ಎನ್ ಪಿಆರ್ ವಿರುದ್ಧ ಶನಿವಾರ ಮಲ್ಲೂರು ಬದ್ರಿಯಾ ನಗರ ಮೈದಾನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಸುನಿಲ್ ಕುಮಾರ್ ಮಾತನಾಡಿ, "ಡಿ.19ರಿಂದ ನಿರಂತರ ಪ್ರತಿಭಟನೆ ಕರಾಳ ಕಾಯಿದೆ ವಿರುದ್ಧ ನಡೆಯುತ್ತಿದೆ. ಹೋರಾಟವನ್ನು ಮುಸ್ಲಿಮರ ಹೋರಾಟ ಎಂದು ಚಿತ್ರೀಕರಣ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ದಾರಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಈ ಕರಾಳ ಕಾಯ್ದೆ ವಿರುದ್ಧ ಹಿಂದೂಗಳು ಕೂಡಾ ಎದ್ದು ನಿಂತಿದ್ದಾರೆ. ದೇಶಾದ್ಯಂತ ನರೇಂದ್ರ ಮೋದಿಗೆ ಮಂಗಳಾರತಿ ಮಾಡುತ್ತಿದ್ದಾರೆ. ಅವರ ಕಾನೂನಿಗೆ ಎದೆಗುಂದಬೇಕಾಗಿಲ್ಲ. ನಾವೇ ನಿಜವಾದ ದೇಶಪ್ರೇಮಿಗಳು. ದೇಶ ಕಟ್ಟುವುದರಲ್ಲಿ ಮುಸ್ಲಿಮರ ಪಾತ್ರ ಬಹಳಷ್ಟಿದೆ. ಮಂಗಳೂರುನಲ್ಲಿ ನಡೆದ ಅಮಾಯಕರ ಕೊಲೆಗೆ ಸಮರ್ಪಕ ನ್ಯಾಯ ಸಿಕ್ಕಿಲ್ಲ. ಇದನ್ನೆಲ್ಲ ಬದಿಗಿಟ್ಟು ಮೋದಿ ಸರ್ಕಾರ ಪಾಠ ನಮಗೆ ಮಾಡಲು ಬಂದಿದೆ" ಎಂದು ಆರೋಪಿಸಿದರು.
ರಮಾನಾಥ ರೈ ಮಾತನಾಡಿ, "ಪ್ರಪಂಚದಲ್ಲಿ ಭಾರತ ಜಾತ್ಯಾತೀತ ಶ್ರೀಮಂತ ರಾಷ್ಟ್ರ ಎನ್ನುವ ಹೆಗ್ಗಳಿಕೆ ಇತ್ತು. ಇದಕ್ಕೆ ಮೋದಿಯ ಹೊಸ ಕಾಯ್ದೆ ಮಸಿ ಬಳಿಯುತ್ತಿದೆ. ಬಿ.ಎ.ಮೊಯ್ದಿನ್ ಗೆದ್ದ ಕ್ಷೇತ್ರ ಇದು. ಮತೀಯ ಗಲಭೆಗಳನ್ನು ಕೆರಳಿಸುವ ಕಾಲಘಟ್ಟ ಇದಾಗಿದೆ. ಮಂಗಳೂರುನಲ್ಲಿ ಪ್ರತಿಭಟನೆಗೆ ಅನುಮತಿ ನೀಡಿ ಬಳಿಕ ಸೆಕ್ಷನ್ ಜಾರಿಯಾಯಿತು. ಇದರಿಂದ ಮಂಗಳೂರುನಲ್ಲಿ ಪ್ರತಿಭಟನಾಕಾರರಿಗೆ ಲಾಠಿಚಾರ್ಜ್ ಆಯಿತು. ಆದರೆ ಅನುಮತಿ ಪಡೆಯದೇ ಗೋಲಿಬಾರ್ ಮಾಡಿದ ಬಗ್ಗೆ ತನಿಖೆ ಆಗಬೇಕು. ಸತ್ಯಾಂಶ ಹೊರಬರಬೇಕು. ಅಲ್ಪಸಂಖ್ಯಾತ ಮತೀಯರಾದರೆ ಅವರ ಸಮುದಾಯಕೆ ತೊಂದರೆ, ಬಹುಸಂಖ್ಯಾತರು ಮತೀಯವಾದಿಗಳಾದರೆ ದೇಶಕ್ಕೆ ತೊಂದರೆ ಎಂದು ನೆಹರು ಈ ಹಿಂದೆ ಹೇಳಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಮಾಡುವುದು ನಾವಲ್ಲ. ಮುಸ್ಲಿಮರ ಪರ ಹೋರಾಟ ಮಾಡುವುದಿಲ್ಲ. ಅವರ ಹಕ್ಕು ನೀಡಿ ಎಂದು ಮಾತ್ರ ಕೇಳುತ್ತೇವೆ. ನಾವು ಯಾವಾಗಲು ಮತೀಯವಾದಿಗಳಾಗಬಾರದು. ಸುಳ್ಳು ಸುದ್ದಿ ಹರಡಿಸಿ ರಾಜಕೀಯ ಲಾಭ ಪಡೆಯುವ ಕಾರ್ಯ ನಡೆಯುತ್ತಿದ್ದು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ" ಎಂದರು.
ಪಿವಿ ಮೋಹನ್ ಮಾತನಾಡಿದರು. ವೇದಿಕೆಯಲ್ಲಿ ಬಪ್ಪಳಿಗೆ ಮಸೀದಿ ಖತೀಬ್ ಅಹ್ಮದ್ ನಯೀಮ್ ಫೈಝಿ, ಎಸ್ಸೆಸ್ಸೆಫ್ ನ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ,ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ನ್ಯಾಯವಾದಿ ಬಿ.ಎ.ಮಹಮ್ಮದ್ ಹನೀಫ್, ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಂತಿಯಾಝ್, ನಿಝಾಮುದ್ದೀನ್ ಉಪಸ್ಥಿತರಿದ್ದರು. ಎನ್.ಇ.ಮಹಮ್ಮದ್ ಸ್ವಾಗತಿಸಿದರು.