ಉಡುಪಿ, ಜೂ 19 (DaijiworldNews/PY) : ಗುರುವಾರ ಮುಂಬೈಯಿಂದ ತೆಕ್ಕಟ್ಟೆಗೆ ಬಂದಿದ್ದ ನಾಲ್ವರಲ್ಲಿ 54 ವರ್ಷ ಪ್ರಾಯದ ವ್ಯಕ್ತಿ ಸಂಜೆಯ ವೇಳೆಗೆ ಮೃತ ಪಟ್ಟಿದ್ದು, ಅವರ ಮೃತ ದೇಹದ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಇದರಿಂದಾಗಿ ಕೊರೊನಾಕ್ಕೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 2 ಕ್ಕೆ ಏರಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.



ಕುಂದಾಪುರ ತಾಲ್ಲೂಕು ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ವತಿಯಿಂದ ನೀಡಲಾದ ಗಂಟಲು ದ್ರವ ಮಾದರಿ ಸಂಗ್ರಹ ಸೆಲ್ಕೋ ಕಿಯೋಸ್ಕ್ ಸೌರ ಚಾಲಿತ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.
ಮುಂಬೈಯಿಂದ ಬಂದಿದ್ದ ಅವರು ಸ್ಥಳೀಯ ಪರೀಕ್ಷಾ ಕೇಂದ್ರದ ದೇಹದ ಉಷ್ಣತೆಯನ್ನು ಪರೀಕ್ಷೆ ಮಾಡಿಕೊಂಡು ಹೋಂ ಕ್ವಾರಂಟೈನ್ಗಾಗಿ ಮನೆಗೆ ತೆರಳಿದ್ದರು. ಸಂಜೆಯ ವೇಳೆಗೆ ಕಾಯಿಲೆ ಉಲ್ಭಣವಾಗಿದ್ದರಿಂದ ಅವರು ಮೃತ ಪಟ್ಟಿದ್ದಾರೆ. ಅವರ ಮನೆ ಇರುವ ಪ್ರದೇಶವನ್ನು ಕಂಟೋನ್ಮೆಂಟ್ ವಲಯವಾಗಿ ಹಾಗೂ ಪರಿಸರವನ್ನು ಬಫರ್ ವಲಯವಾಗಿ ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮೃತ ದೇಹದ ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈ ವರೆಗೆ ಪತ್ತೆಯಾಗಿರುವ 1039 ಸೋಂಕಿನ ಪ್ರಕರಣಗಳಲ್ಲಿ ಕೇವಲ 92 ಪ್ರಕರಣಗಳು ಮಾತ್ರ ಸಕ್ರೀಯವಾಗಿದೆ. ಈ ಪೈಕಿ ಕುಂದಾಪುರ ಹಾಗೂ ಬೈಂದೂರು ಭಾಗದಲ್ಲಿಯೇ ಗರಿಷ್ಠ 755 ಪ್ರಕರಣಗಳು ಪತ್ತೆಯಾಗಿತ್ತು. ಇದರಲ್ಲಿ ಕೇವಲ 59 ಪ್ರಕರಣಗಳು ಮಾತ್ರ ಸಕ್ರೀಯವಾಗಿದೆ. ಶೇಖಡವಾರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರನ್ನು ಗುಣಪಡಿಸುವಲ್ಲಿ ಇಲ್ಲಿನ ಡಾ.ನಾಗಭೂಷಣ ಉಡುಪ, ಡಾ.ರಾಬರ್ಟ್ ರೆಬೆಲ್ಲೋ, ಡಾ.ನಾಗೇಶ್, ಡಾ.ಕೆ.ಪ್ರೇಮಾನಂದ, ಡಾ.ಸನ್ಮಾನ್ ಶೆಟ್ಟಿ ಮುಂತಾದ ವೈದ್ಯ ತಂಡದ ನೇತ್ರತ್ವದಲ್ಲಿ ಕೊವಿಡ್-19 ವಾರಿಯರ್ಸ್ ಹಗಲಿರುವ ಸೇವೆಯನ್ನು ಮಾಡಿ ಮಾದರಿಯಾಗಿದ್ದಾರೆ. ಕುಂದಾಪುರದ ಡಾ.ಜಿ.ಶಂಕರ್ ಆಸ್ಪತ್ರೆಯನ್ನು ಆಮ್ಲಜನಕ, ವೆಂಟಿಲೇಟರ್ ಮುಂತಾದ ಸೌಲಭ್ಯಗಳನ್ನು ಅಳವಡಿಸಿ ಸುಸಜ್ಜಿತ ಕೊವಿಡ್-19 ಆಸ್ಪತ್ರೆಯನ್ನಾಗಿಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿ.ಸಿ ತಿಳಿಸಿದರು.
ಸೋಂಕು ಕಾಣಿಸಿಕೊಂಡ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದ ಕಾಯಿಲೆಯನ್ನು ಕೂಡಲೇ ಗುಣಪಡಿಸಲು ಪ್ರಯತ್ನ ಮಾಡಬಹುದು. ಆದರೆ ಪರಿಸ್ಥಿತಿ ಕೈ ಮೀರಿ ಹೋದ ಬಳಿಕ ವೈದ್ಯರಿಗೂ ರೋಗಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುದಿಲ್ಲ. ಈ ಹಿನ್ನೆಲೆಯಲ್ಲಿ ಹೊರ ಭಾಗದಿಂದ ಬಂದವರು ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕೊರೊನಾ ಶಂಕೆಯ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಫಿವರ್ ಕ್ಲಿನಿಕ್ಗಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ.
ಸೌರ ಚಾಲಿತ ಕಿಯೋಸ್ಕ್ ಭಾರತೀಯ ವಿಕಾಸ ಟ್ರಸ್ಟ್ ಸೌರ ಚಾಲಿತ ಗಂಟಲು ದ್ರವ ಮಾದರಿ ಸಂಗ್ರಹ 'ಕಿಯೋಸ್ಕ್' ನೀಡಿರುವುದು, ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಕೊರೊನಾ ವಾರಿಯರ್ಸ್ಗಳ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಈ ಹಿಂದೆ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಅವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಂಚಾರಿ ಗಂಟಲು ದ್ರವ ಮಾದರಿ ಸಂಗ್ರಹ ಘಟಕವನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿತ್ತು. 'ಉಡುಪ' ಮಾದರಿಗೆ ರಾಜ್ಯದಲ್ಲಿಯೇ ವಿಶೇಷ ಬೇಡಿಕೆ ಇದೆ. ಸರ್ಕಾರದ ಸಲಹೆಯಂತೆ ಹೆಚ್ಚು ಸಂಚಾರಿ ಘಟಕವನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಕಂದಾಯ ಉಪವಿಭಾಗಾಧಿಕಾರಿ ಕೆ.ರಾಜು, ಸೆಲ್ಕೋ ಕಂಪೆನಿಯ ವಲಯ ಮಹಾಪ್ರಬಂಧಕ ಗುರುಪ್ರಸಾದ್ ಶೆಟ್ಟಿ, ಭಾರತೀಯ ವಿಕಾಸ್ ಟ್ರಸ್ಟ್ನ ಸಿಇಓ ಮನೋಹರ್ ಕೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಡಾ.ರಾಬರ್ಟ್ ರೆಬೆಲ್ಲೋ, ಡಾ.ನಾಗೇಶ್ ಇದ್ದರು.