ಸುಬ್ರಹ್ಮಣ್ಯ, ಜೂ 20 (DaijiworldNews/PY) : ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಹೆಸರಿನಲ್ಲಿ ಅಕ್ರಮ ವೆಬ್ಸೈಟ್ ಮೂಲಕ ಆನ್ಲೈನ್ ಸೇವೆಗಳನ್ನು ಬುಕ್ ಮಾಡುತ್ತಿದ್ದಾರೆಂದು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನ್ಲೈನ್ ಸೇವೆಗೆ ಪ್ರತ್ಯೇಕವಾದ ವೆಬ್ಸೈಟ್ ಆರಂಭಿಸಲು ತೀರ್ಮಾನ ಮಾಡಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಚಿವರು ಶನಿವಾರ ಕಾರ್ಯಕ್ರಮ ಇರುವ ನಿಟ್ಟಿನಲ್ಲಿ ಗುತ್ತಿಗಾರಿಗೆ ಬಂದಿದ್ದು, ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆನ್ಲೈನ್ ಸೇವೆಗಾಗಿ ಪ್ರತ್ಯೇಕ ವ್ಯವಸ್ಥೆ ಆರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಗತಿ ಪರಿಶೀಲನಾ ಸಭೆಗೆ ಬಂದಿದ್ದ ಸಂದರ್ಭ ಸಚಿವರನ್ನು ಭೇಟಿ ಮಾಡಿದ್ದ ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ವೇದಿಕೆಯ ಶಿವರಾಮ ರೈ ನೇತೃತ್ವದ ನಿಯೋಗವು, ಆನ್ಲೈನ್ ಸೇವೆ ಅವಕಾಶವನ್ನು ಈ ಸಂಸ್ಥೆಗೆ ನೀಡಿರುವುದು ಸರಿಯಲ್ಲ. ಇದನ್ನು ಬದಲಾಯಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.
ವ್ಯಕ್ತಿಯೊಬ್ಬರು ನಿರ್ವಹಿಸುತ್ತಿರುವ ಈ ವೆಬ್ಸೈಟ್ ಸುಬ್ರಹ್ಮಣ್ಯದಲ್ಲಿ ನಡೆಸುತ್ತಿದ್ದ ಸೇವೆಗಳನ್ನು ಅಕ್ರಮವಾಗಿ ಬುಕ್ ಮಾಡಿ ದೇವಸ್ಥಾನಕ್ಕೆ ವಂಚನೆ ಎಸಗುತ್ತಿರುವ ಆರೋಪವನ್ನು ಎದುರಿಸುತ್ತಿತ್ತು. ಈ ವೆಬ್ಸೈಟ್ ಸೇರಿದಂತೆ ಮೂರು ವೆಬ್ಸೈಟ್ಗಳ ವಿರುದ್ದ ಈ ಹಿಂದೆ ಪ್ರಕರಣ ದಾಖಲಿಸಲಾಗಿತ್ತು. ಕುಕ್ಕೆ ಸುಬ್ರಹ್ಮಣ್ಯದ ಕಾರ್ಯನಿರ್ವಹಣಾಧಿಕಾರಿ 2018 ಅ.16 ರಂದು ಈ ಮೂರು ವೆಬ್ಸೈಟ್ಗಖ ವಿರುದ್ದ ಸೈಬರ್ ಕ್ರೈಂ ವಿಭಾಗಕ್ಕೆ ದೂರು ದಾಖಲಿಸಿದ್ದರು. ಈಗ ಈ ಪ್ರಕರಣ ಹೈಕೋರ್ಟ್ನಲ್ಲಿದ್ದು, ಆರೋಪಿ ಅರ್ಜುನ್ ರಂಗಾ ವಿರುದ್ದದ ಕ್ರಮಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ.