ಬೆಳ್ತಂಗಡಿ, ಜೂ 26 (Daijiworld News/MSP):ಶುಕ್ರವಾರ ನಸುಕಿನ ಜಾವ ಅಡಿಕೆ ವ್ಯಾಪಾರಿಯ ಮನೆಗೆ ನುಗ್ಗಿದ ದರೋಡೆಕೋರರು ಮನೆಮಂದಿಯನ್ನು ಕಟ್ಟಿಹಾಕಿ 13 ಲಕ್ಷರೂ. ಮೌಲ್ಯದ ನಗ ನಗದು ದರೋಡೆಗೈದ ಘಟನೆ ತಾಲೂಕಿನ ಕಲ್ಮಂಜ ಗ್ರಾಮದ ನೀರ ಚಿಲುಮೆ ಎಂಬಲ್ಲಿ ನಡೆದಿದೆ.





ಉಜಿರೆಯಲ್ಲಿ ಅಡಿಕೆ ವ್ಯಾಪಾರ ಮಾಡುವ ಅಚ್ಯುತ ಭಟ್ ಎಂಬವರ ಮನೆಗೆ ಮುಂಜಾನೆ 2.30 ರ ಸುಮಾರಿಗೆ ನುಗ್ಗಿದ ನಾಲ್ವರು ಮುಸುಕಧಾರಿಗಳ ದರೋಡೆಕೋರರ ತಂಡ 40 ಪವನ್ ಚಿನ್ನ, ಒಂದು ಕೆಜಿ ಬೆಳ್ಳಿ, 25 ಸಾವಿರ ರೂ. ದೋಚಿದ್ದಾರೆ.
ನಸುಕಿನಲ್ಲಿ ನಾಯಿ ಬೊಗಳಿದ್ದನ್ನು ಕೇಳಿ ಅಚ್ಯುತ ಭಟ್ ಹೊರಬಂದಿದ್ದು ಈ ವೇಳೆ ಒಳನುಗ್ಗಿದ ದರೋಡೆಕೋರರು ಅವರನ್ನು ಸಹಿತ ಮನೆಮಂದಿಯನ್ನು ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ನೀಡಿದರೆ ಮನೆಮಂದಿಯ ಜೀವಹಾನಿ ಮಾಡುವುದಾಗಿ ಬೆದರಿಕೆ ನೀಡಿ ದರೋಡೆಗೈದಿದ್ದಾರೆ.
ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್.ಪಿ.ಜಿ , ಧರ್ಮಸ್ಥಳ ಪಿಎಸ್ಐ ಪವನ್ ನಾಯ್ಕ್ ಮತ್ತು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.