ಮಂಗಳೂರು, ಜು. 05 (DaijiworldNews/SM): ನಗರದ ಹೊರವಲಯದ ಗುರುಪುರದ ಬಂಗ್ಲಗುಡ್ಡೆಯಲ್ಲಿ ಗುಡ್ಡಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ನಳಿನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಪ್ರಮಾದ ನಡೆದಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿರುವ ಅವರು, ಕುಟುಂಬಸ್ಥರ ಅಳಲು ಆಲಿಸಿದರು. ಈ ಸಂದರ್ಭ ಸಂಸದರಿಗೆ ಮಾಹಿತಿ ನೀಡಿದ ಸ್ಥಳೀಯರು ಗುಡ್ಡ ಬಿರುಕು ಬಿಟ್ಟಿರುವ ಬಗ್ಗೆ ನಾವು ಈಗಾಗಲೇ ಸ್ಥಳೀಯ ಪಂಚಾಯತ್ ಗೆ ಮಾಹಿತಿ ನೀಡಲಾಗಿದೆ. ಆದರೆ, ಸ್ಥಳೀಯ ಪಂಚಾಯತ್ ನವರು ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದಾಗಿ ಅವಘಡ ನಡೆದಿದೆ ಎಂದು ಸಂಸದರಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಈ ಸಂಡರ್ಭ ಪ್ರತಿಕ್ರಿಯೆ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿರುವ ಸಂಸದರು, ಈ ಬಗ್ಗೆ ಸೂಕ್ತ ತನಿಖೆಗೆ ಆದೇಶ ನೀಡಲಾಗುವುದು. ಒಂದೊಮ್ಮೆ ಇಂತಹ ಪ್ರಮಾದಗಳಾಗಿದ್ದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.