ಬೆಳ್ತಂಗಡಿ, ಜು 15 (DaijiworldNews/PY): ಮಾಲಕರು ಹಾಗೂ ಗ್ರಾಹಕರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಹೊಡೆದಾಡಿಕೊಂಡ ಘಟನೆ ಉಜಿರೆ ಗ್ರಾಮದ ಹಳ್ಳಿಮನೆ ರೆಸಾರ್ಟ್ನಲ್ಲಿ ನಡೆದಿದೆ.

ಆರೋಪಿಗಳಾದ ಹಳ್ಳಿಮನೆ ರೆಸಾರ್ಟ್ ಮಾಲಕ ಪ್ರವೀಣ್ ಹಾಗೂ ಮನೋಜ್ ಕಂಜರ್ಪ, ರಂಜನ್ ಕಡಂಬು, ಪ್ರಜ್ವಲ್, ಗಣೇಶ್ ಶೆಟ್ಟಿ ಕುಂಟಿನಿ, ಶರತ್ ಕುಂಜರ್ಪ ಇವರು ನಿಡ್ಲೆ ಗ್ರಾಮದ ಕೊಡಂಗೆ ನಿವಾಸಿ ಗಿರೀಶ್ ಹಾಗೂ ಅವರ ಸ್ನೇಹಿತರ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ
ಪ್ರಕರಣದ ಹಿನ್ನೆಲೆ:
ಸೋಮವಾರದಂದು ಗಿರೀಶ್ ಮತ್ತುಅವರ ಸ್ನೇಹಿತರಾದ ಸಂದೇಶ್, ಬಾಲಕೃಷ್ಣ ಶೆಟ್ಟಿ ಅವರೊಂದಿಗೆ ಉಜಿರೆ ಹಳ್ಳಿಮನೆ ರೆಸಾರ್ಟ್ಗೆ ಹೋಗಿದ್ದು, ಆಹಾರ ಸೇವಿಸಿ ಬಿಲ್ ನೀಡಿ ಹೊರಗೆ ಬರುತ್ತಿದ್ದರು. ಹೀಗೆ ಬರುತ್ತಿರುವ ಸಂದರ್ಭ ಗಿರೀಶ್ ಅವರೊಂದಿಗೆ ರೆಸಾರ್ಟ್ ಮಾಲಕ ಪ್ರವೀಣ್ ಹಾಗೂ ಅವರ ಜೊತೆಗಾರರು ಅನಾವಶ್ಯಕವಾದ ಮಾತು ತೆಗೆದಿದದ್ದಾರೆ. ಅಲ್ಲದೇ, ಇದರ ಪರಿಣಾಮ ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆಸಿದ್ದು, ನಂತರ ಪ್ರವೀಣ್ ಹಾಗೂ ಅವರ ಜೊತೆಗಾರರು ಗಿರೀಶ್ ಹಾಗೂ ಅವರ ಸ್ನೇಹಿತರನ್ನು ಅಡ್ಡಗಟ್ಟಿ ಅವರ ಮೇಲೆ ಗಂಭೀರವಾದ ಹಲ್ಲೆ ನಡೆಸಿದ್ದಾರೆ.
ಅಲ್ಲದೇ, ಗಿರೀಶ್ ಅವರ ಪ್ಯಾಂಟ್ ಜೇಬಿನಲ್ಲಿದ್ದ 1,98,000 ರೂ. ನಗದು ಸಹಿತ ಸುಮಾರು 4 ಪವನ್ ಸರ ಹಾಗೂ ಸಂದೇಶ್ ಅವರ ಚಿನ್ನದ ಸರವನ್ನು ಎಗರಿಸಿದ್ದು, ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಒಟ್ಟು 1,50,000 ರೂ. ಮೌಲ್ಯದ ಚಿನ್ನಾಭರಣ ಎಗರಿಸಿರುವುದಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರತಿದೂರು ನೀಡಿರುವ ರೆಸಾರ್ಟ್ ಪಾಲುದಾರೆ ಉಜಿರೆ ಅಳಿಕೆ ನಿವಾಸಿ ಸವಿತಾ ಬ್ಯಾಪ್ಟಿಸ್ಟ್ (34) ಅವರು, ಆರೋಪಿಗಳಾದ ಗಿರೀಶ್, ಭರತ್, ಬಾಲಕೃಷ್ಣ ಹಾಗೂ ಸಂದೇಶ್ ಅವರು ಮದ್ಯಪಾನ ಹಾಗೂ ಆಹಾರ ಕೇಳಿಬಂದಿದ್ದು, ಮದ್ಯ ಸೇವಿಸಲು ರೆಸಾರ್ಟ್ನಲ್ಲಿ ನಿರಾಕರಿಸಿದ್ದ ಕಾರಣ ಅವಾಚ್ಯ ಶಬ್ದಗಿಳಿಂದ ಬೈದಿದ್ದು ಅಲ್ಲದೇ ಹಲ್ಲೆ ಮಾಡಿರುವುದಾಗಿ ದೂರು ದಾಖಲಿಸಿದ್ದಾರೆ.
ಇತ್ತಂಡಗಳ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.