ಕಡಬ, ಜು 20 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟಿ ಅಮಾವಾಸ್ಯೆ ಆಚರಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಕಡಬ ಸೇರಿದಂತೆ ಹಲವೆಡೆ ಲಾಕ್ ಡೌನ್ ಗೆ ಮನ್ನಣೆ ನೀಡದೇ ಜನರು ಮಾಂಸ ಮೀನು ಖರೀದಿಗೆ ಮುಗಿಬೀಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು.




ಚಿಕನ್, ಮಟನ್ ಸೆಂಟರ್ ಗಳಲ್ಲಿ ಬಾರೀ ಜನಜಂಗುಳಿ ಕಂಡುಬಂದಿದ್ದು ಸಾಮಾಜಿಕ ಅಂತರ ಮಾಸ್ಕ್ ಧರಿಸದೇ ಚಿಕನ್ ಮಟನ್ ಖರೀದಿಗೆ ಮುಂದಾಗುತ್ತಿದ್ದರು. ಇನ್ನು ಅಗತ್ಯ ಸಾಮಾಗ್ರಿ ಖರೀದಿಗೆ ಇದ್ದ ವಿನಾಯಿತಿಯ ಬಳಿಕವೂ ಅಂದರೆ 11 ಗಂಟೆಯ ನಂತರವೂ ಅಂಗಡಿಗಳು ಬಂದ್ ಮಾಡದೇ ವ್ಯಾಪಾರಿಗಳು ಅಸಡ್ಡೆ ತೋರುತ್ತಿದ್ದರು.
ಪೋಲೀಸರು, ಅಧಿಕಾರಿಗಳು ಅಂಗಡಿ ಬಂದ್ ಮಾಡುವಂತೆ ವಿನಂತಿ ಮಾಡಿದರೂ ವ್ಯಾಪಾರಿಗಳು,ಜನರು ಮನ್ನಣೆ ನೀಡದ ಕಾರಣ ಪೊಲೀಸರಿಂದ ಹಲವರಿಗೆ ಲಾಟಿ ಪ್ರಯೋಗ ಮಾಡುವ ಅನಿವಾರ್ಯತೆ ಎದುರಾಯಿತು.
ಕಡಬ,ಕಳಾರ,ಅಲಂಕಾರು ಕೋಡಿಂಬಾಳದಲ್ಲಿ ಹಲವರಿಗೆ ಲಾಟಿ ಏಟು ಬಿದ್ದಿದೆ. ಕಡಬ ಪೋಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ನೇತೃತ್ವದಲ್ಲಿ ಗಸ್ತು ತಿರುಗಿದ್ದು , ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಸೇರಿದಂತೆ ಅಧಿಕಾರಿಗಳು ಅಂಗಡಿಗಳನ್ನು ಮುಚ್ಚಿಸುವ ಕಾರ್ಯದಲ್ಲಿ ನಿರತರಾಗಿದ್ದರು.