ಉಡುಪಿ, ಜು 20 (Daijiworld News/MSP): ಉಡುಪಿ ಜಿಲ್ಲೆಯಲ್ಲಿ ಕೋವಿಡ್ 19 ಹರಡುವುದನ್ನು ನಿಯಂತ್ರಿಸುವಲ್ಲಿ, ಜಿಲ್ಲೆಯ ಔಷಧ ನಿಯಂತ್ರಣ ಇಲಾಖೆ ಮಹತ್ವದ ಪಾತ್ರ ವಹಿಸುತ್ತಿದ್ದು, ಜ್ವರ ಶೀತ ಕೆಮ್ಮು ಲಕ್ಷಣ ಗಳಿರುವ ವ್ಯಕ್ತಿಗಳಲ್ಲಿ, ಕೋವಿಡ್-19 ಹೆಚ್ಚಿನ ಪ್ರಮಾಣದಲ್ಲಿ ಕಂಡುಬರಲಿದ್ದು, ಇಂತಹ ವ್ಯಕ್ತಿಗಳು ಮೆಡಿಕಲ್ ಶಾಪ್ ಗಳಲ್ಲಿ ಔಷಧ ಪಡೆದು, ಕೋವಿಡ್-19 ತಪಾಸಣೆಯಿಂದ ತಪ್ಪಿ ಹೋಗಿ, ಹೆಚ್ಚಿನ ಪ್ರಮಾಣದಲ್ಲಿ ರೋಗ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 385 ಮೆಡಿಕಲ್ ಶಾಪ್ ಗಳಿದ್ದು, ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ವೈದ್ಯರ ಅನುಮತಿ ಚೀಟಿ ಇಲ್ಲದೇ ಜ್ವರ ಕೆಮ್ಮು ಶೀತ ರೋಗಿಗಳಿಗೆ ಔಷಧ ವಿತರಿಸದಂತೆ ಈಗಾಗಲೇ ಸೂಚನೆ ನೀಡಿದ್ದು, ವೈದ್ಯರ ಅನುಮತಿ ಮೇರೆಗೆ ಔಷಧ ನೀಡಿದಲ್ಲಿ ಅಂತಹ ವ್ಯಕ್ತಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸುವಂತೆ ಸೂಚಿಸಿದ್ದು, ಇದಕ್ಕಾಗಿ ಫಾರ್ಮಾ ರಿಫೋರ್ಟಿಂಗ್ ಬ್ಯಾಕ್ ಅಪ್ ಎಂಬ ಸಾಫ್ಟ್ ವೇರ್ ತಯಾರಿಸಿದ್ದು, ಇದರಲ್ಲಿ ಜ್ವರ ಶೀತ ಕೆಮ್ಮ ರೋಗಗಳಿಗೆ ಔಷಧ ಪಡೆದ ವ್ಯಕ್ತಿಯ ವಿವರಗಳನ್ನು ಕೂಡಲೇ ದಾಖಲಿಸಲಾಗುತ್ತಿದೆ.
ಈ ರೀತಿ ಜ್ವರ ಶೀತ ಕೆಮ್ಮ ರೋಗಗಳಿಗೆ ಔಷಧ ಪಡೆದ ವ್ಯಕ್ತಿಯ ವಿವರಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನೀಡಲಾಗುತ್ತದೆ, ಈ ವ್ಯಕ್ತಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸುವ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆತನ ಆರೋಗ್ಯ ಪರಿಸ್ಥಿತಿಯ ಮಾಹಿತಿ ಪಡೆದು, ಅಗತ್ಯ ಬಿದ್ದಲ್ಲಿ ಆತನ ಪರೀಕ್ಷೆ ನಡೆಸುತ್ತಿರುವುದರಿಂದ, ಜಿಲ್ಲೆಯಲ್ಲಿ ಐ.ಎಲ್.ಐ ಮತ್ತು ಸಾರಿ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿನ ಮೆಡಿಕಲ್ ಶಾಪ್ ಗಳು ಪ್ರತಿದಿನ ತಾವು ಜ್ವರ ಕೆಮ್ಮು ಶೀತ ರೋಗಿಗಳಿಗೆ ಔಷಧ ನೀಡಿದ ವಿವರಗಳನ್ನು ಸಾಪ್ಟ್ ವೇರ್ ನಲ್ಲಿ ದಾಖಲಿಸುತ್ತಿದ್ದು, ಪ್ರತಿದಿನ ಶೇ.95 ವರದಿಯಾಗುತ್ತಿದೆ, ಕೆಲವು ಮೆಡಿಕಲ್ ಶಾಪ್ ಗಳಲ್ಲಿ ಆ ದಿನ ಈ ರೋಗಕ್ಕೆ ಔಷಧ ನೀಡದೇ ಇರುವುದು ಹಾಗೂ ಆ ದಿನ ಬಾಗಿಲು ತೆರೆಯದೇ ಇರುವುದು ಮುಂತಾದ ಕಾರಣಗಳನ್ನು ಹೊರತುಪಡಿಸಿದರೇ ಎಲ್ಲಾ ಶಾಪ್ ಗಳು ವರದಿ ನೀಡುತ್ತಿದ್ದು, ಜಿಲ್ಲೆಯ ಔಷಧ ಮಾರಾಟಗಾರರ ಸಂಘದಿಂದ ಸಹ ಉತ್ತಮ ಸಹಕಾರ ದೊರೆಯುತ್ತಿದೆ ಎನ್ನುತ್ತಾರೆ ಜಿಲ್ಲಾ ಔಷಧ ನಿಯಂತ್ರಣ ಅಧಿಕಾರಿ ನಾಗರಾಜ್.
ಪ್ರಾರಂಭದಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಔಷಧ ವಿವರಗಳನ್ನು ಸಾಪ್ಟ್ ವೇರ್ ನಲ್ಲಿ ಅಳವಡಿಸಲು ಅತ್ಯಂತ ಕಷ್ಟವಾಗಿದ್ದು, ಸತತ ಪ್ರಯತ್ನದಿಂದ ಸಾಪ್ಟ್ ವೇರ್ ಬಳಕೆ ಪ್ರಸ್ತುತ ಸುಲಭವಾಗಿದೆ, ಜಿಲ್ಲಾಧಿಕಾರಿ ಜಿ.ಜಗದೀಶ್ , ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಎಸ್ಪಿ ವಿಷ್ಣುವರ್ಧನ್ ಅವರ ನಿರ್ದೇಶನದಲ್ಲಿ, ಈ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ಜಿಲ್ಲಾ ಔಷಧ ನಿಯಂತ್ರಣ ಅಧಿಕಾರಿ.
ಜಿಲ್ಲೆಯ ಮೆಡಿಕಲ್ ಶಾಪ್ ಗಳು ಅತ್ಯಂತ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುತ್ತಿದ್ದು, ವೈದ್ಯರ ಸಲಹಾ ಚೀಟಿಯಿಲ್ಲದೇ ಜ್ವರ ಶೀತ ಕೆಮ್ಮ ರೋಗಕ್ಕೆ ಔಷಧಗಳನ್ನು ನೀಡದೇ ಇದ್ದು, ಜಿಲ್ಲೆಯ ಹಲವು ಹಿರಿಯ ಅಧಿಕಾರಿಗಳೇ ಈ ಸಮಸ್ಯೆಗೆ ಒಳಗಾಗಿ, ತಮಗೆ ಕರೆ ಮಾಡಿದ್ದಾರೆ, ಆದರೆ ಜಿಲ್ಲೆಯ ಜನರ ಆರೋಗ್ಯದ ದೃಷ್ಠ್ಠಿಯಿಂದ ಜಿಲ್ಲಾಡಳಿತ ರೂಪಿಸಿರುವ ಈ ನಿಯಮಗಳಿಗೆ ಬದ್ದರಾಗಿದ್ದು, ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಿಸುವಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು, ರೋಗ ಲಕ್ಷಣಗಳಿದ್ದಲ್ಲಿ ತಮ್ಮ ಸಮೀಪದಲ್ಲಿರುವ ಫೀವರ್ ಕ್ಲಿನಿಕ್ ಗಳಲ್ಲಿ ಪರೀಕ್ಷಿಸಿಕೊಂಡು, ಸೋಂಕು ಹರಡದಂತೆ ಎಚ್ಚರವಹಿಸಬೇಕು ಎನ್ನುತ್ತಾರೆ ಜಿಲ್ಲಾ ಔಷಧ ನಿಯಂತ್ರಣ ಅಧಿಕಾರಿ ನಾಗರಾಜ್.