ಬೆಳ್ತಂಗಡಿ, ಆ 08(DaijiworldNews/HR): ತಾಲೂಕಿನಲ್ಲಿ ಸತತ ನಾಲ್ಕನೆಯ ದಿನವೂ ಭಾರೀ ಮಳೆ ಮುಂದುವರಿದಿದ್ದು ನದಿಗಳು ದಡಮೀರಿ ಹರಿಯುತ್ತಿದೆ.



ಚಾರ್ಮಾಡಿ ಗ್ರಾಮದ ಕೊಳಂಬೆಯಲ್ಲಿ ನದಿಬದಿಯಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.
ಕಳೆದ ಮಳೆಗಾಲದಲ್ಲಿ ಇಲ್ಲಿ ಮೃತ್ಯುಂಜಯ ನದಿ ಹರಿದು ಭಾರೀ ಪ್ರಮಾಣದಲ್ಲಿ ನಾಶ ಸಂಭವಿಸಿತ್ತು. ಕೃಷಿ ಭೂಮಿಗೆ ನೀರು ನುಗ್ಗದಿರಲೆಂದು ಪ್ರವಾಹದ ಬಳಿಕ ಇಲ್ಲಿ 280 ಮೀಟರ್ ತಡಗೋಡೆ ನಿರ್ಮಿಸಲಾಗಿತ್ತು. ಆದರೆ ಗುರುವಾರ ರಾತ್ರಿ ನದಿ ನೀರಿನ ರಭಸಕ್ಕೆ ಸುಮಾರು 30ಅಡಿಯಷ್ಟು ತಡೆಗೋಡೆ ಕುಸಿದು ನೀರಿನಲ್ಲಿ ಕೊಚ್ಚಿ ಹೋಗಿದೆ. ಇದೀಗ ಮತ್ತೆ ನೀರು ತೋಟಕ್ಕೆ ನುಗ್ಗುವ ಭಯವಿದ್ದು ಕಳಪೆ ಕಾಮಗಾರಿಯಿಂದಾಗಿ ತಡೆಗೋಡೆ ಕುಸಿದಿದೆ ಎಂದು ಜನರು ಆರೋಪಿಸುತ್ತಿದ್ದಾರೆ.
ತಾಲೂಕಿನ ಕಾಜೂರು ನಿವಾಸಿ ಮರಿಯಮ್ಮ ಅವರ ಮನೆ ಭಾಗಶ ಕುಸಿದಿದೆ. ಬಜಿರೆ ಗ್ರಾಮದ ಸುಂದರ ಹೆಗ್ಡೆ ಎಂಬವರ ಮನೆ ಭಾಗಶ ಕುಸಿದಿದ್ದು ನಷ್ಟ ಸಂಭವಿಸಿದೆ. ಚಾರ್ಮಾಡಿ ಗ್ರಾಮದ ವಿವಿದೆಡೆ ಮನೆಗಳ ಮೇಲೆ ಮರಗಳು ಬಿದ್ದು ಸಣ್ಣಪುಟ್ಟ ಹಾನಿಗಳಾಗಿವೆ. ಚಾರ್ಮಾಡಿ ಅಂತರ ಎಂಬಲ್ಲಿ ಮರಳಿನ ತಡೆಗೋಡೆ ನೀರು ಪಾಲಾಗಿದ್ದು ನದಿ ತೋಟಗಳಿಗೆ ನುಗ್ಗುವ ಅಪಾಯವಿದೆ. ಇಲ್ಲಿ ಸೇತುವೆಯ ಸಂಪರ್ಕ ರಸ್ತೆಯಲ್ಲಿಯೂ ನೀರು ಹರಿಯುತ್ತಿದ್ದು ವಾಹನ ಸಂಚಾರ ಅಸಾಧ್ಯವಾಗಿದೆ.