ಮಂಗಳೂರು, ಆ. 10 (DaijiworldNews/MB) : ವಿದೇಶದಿಂದ ಕರ್ನಾಟಕ ರಾಜ್ಯಕ್ಕೆ ವಾಪಾಸ್ ಆಗುವವರ ಕ್ವಾರಂಟೈನ್ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬದಲಿಸಿದ್ದು ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಬೇಕಾಗಿಲ್ಲ. ಬದಲಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ಗೆ ಒಳಗಾಗಬೇಕಾಗಿದೆ.

ಈ ಹಿಂದೆ ವಿದೇಶದಿಂದ ವಾಪಾಸ್ ಆಗುವವರಿಗೆ 7 ದಿನಗಳ ಕಾಲ ಸಾಂಸ್ಥಿಕ ಕ್ವಾರೆಂಟೈನ್ ಇದ್ದು ಬಳಿಕ ಕೊರೊನಾ ವರದಿ ನೆಗೆಟಿವ್ ಬಂದಲ್ಲಿ 7 ದಿನಗಳ ಕಾಲ ಹೋಂ ಕ್ವಾರಂಟೈನ್ಗೆ ಒಳಗಾಗಬೇಕಿತ್ತು.
ಇನ್ನು ಮುಂದೆ ವಿದೇಶದಿಂದ ಬರುವವರಿಗೆ ಜ್ವರ, ಶೀತ, ಕೆಮ್ಮು ಮೊದಲಾದ ಕೊರೊನಾ ಲಕ್ಷಣಗಳು ಕಂಡುಬಂದಲ್ಲಿ ಅವರಿಗೆ ರ್ಯಾಪಿಡ್ ಆಂಟಿಜ್ನ್ ಟೆಸ್ಟ್ ನಡೆಸಿ ಕೊರೊನಾ ಪಾಸಿಟಿವ್ ಆದಲ್ಲಿ ಹೋಂ ಐಸೊಲೇಷನ್ ಅಥವಾ ಆಸ್ಪತ್ರೆಗೆ ದಾಖಲಿಸಬೇಕು. ನೆಗಟಿವ್ ವರದಿ ಬಂದ್ದಲ್ಲಿ 14 ದಿನಗಳ ಕಾಲ ಕಡ್ಡಾಯ ಹೋಂ ಕ್ವಾರಂಟೈನ್ಗೆ ಒಳಗಾಗಬೇಕಾಗಿದೆ. ಒಂದು ವೇಳೆ ಹೋಂ ಕ್ವಾರಂಟೈನ್ ಸಾಧ್ಯವಾಗದಿದ್ದಲ್ಲಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಬೇಕಿದೆ.
ಇನ್ನು ಅಲ್ಪಕಾಲದ ಅವಧಿಗೆ ಪ್ರಯಾಣಕ್ಕೆ ಆಗಮಿಸುವವರು ಕೊರೊನಾ ನೆಗೆಟಿವ್ ವರದಿಯನ್ನು ನೀಡಬೇಕಾಗಿದೆ. ಹಾಗೆಯೇ ಎಲ್ಲಾ ಪ್ರಯಾಣಿಕರು ಯಾತ್ರಿ ಕರ್ನಾಟಕ ಆನ್ಲೈನ್ ಪೋರ್ಟಲ್ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕಾಗಿದೆ.
ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದೇಶದಿಂದ ಆಗಮಿಸುವವರಿಗೆ 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿತ್ತು. ಹಾಗೆಯೇ ವಿದೇಶದಿಂದ ಬಂದವರಲ್ಲಿ 10 ವರ್ಷದೊಳಗಿನ ಮಕ್ಕಳು, 60 ವರ್ಷದ ಮೇಲಿನವರು, ಗರ್ಭಿಣಿಯರು, ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರನ್ನು ಸಾಂಸ್ಥಿಕ ಕ್ವಾರೆಂಟೈನ್ (ಲಾಡ್ಜ್) ಗೆ ಕಳುಹಿಸಿದ ಮರುದಿನವೇ ಅವರ ಗಂಟಲ ದ್ರವ ಮಾದರಿ ಸಂಗ್ರಹಿಸಿ ವರದಿ ನೆಗೆಟಿವ್ ಬಂದಲ್ಲಿ 14 ದಿನಗಳ ಹೋಂ ಕ್ವಾರೆಂಟೈನ್ ಗೆ ಕಳುಹಿಸಲಾಗುತ್ತಿತ್ತು.