ಮಂಗಳೂರು, ಆ 13 (Daijiworld News/MSP): ಸಾಮಾಜಿಕ ಜಾಲತಾಣದ ಮೂಲಕ ಧಾರ್ಮಿಕ ಅವಹೇಳನ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕದಡುವಂತಹ ಯಾವುದೇ ವಿಚಾರಗಳ ಕುರಿತು ಪೋಸ್ಟ್, ಶೇರ್ ಹಾಗೂ ಕಮೆಂಟ್ ಮಾಡುವುದು ಕಂಡುಬಂದರೆ ಅಂತಹ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.


ಈಗಾಗಲೇ ನಗರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದ್ದು ಈ ಕುರಿತು ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಮತ, ಧಾರ್ಮಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ಯಾವುದೇ ವ್ಯಕ್ತಿಗಳು ಧಾರ್ಮಿಕ ಅವಹೇಳನ ಮಾಡುವ ವಿಚಾರಗಳನ್ನು ಸೃಷ್ಠಿಸುವುದಾಗಲಿ, ಹಂಚಿಕೊಳ್ಳುವುದಾಗಲಿ ಹಾಗೂ ಅಭಿಪ್ರಾಯ ವ್ಯಕ್ತಪಡಿಸುವುದಾಗಲಿ ಹಾಗೂ ಟೀಕೆ ಮಾಡುವುದಾಗಲಿ ಕಂಡು ಬಂದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ನಡೆದ ಗಲಭೆಯ ಹಿನ್ನಲೆಯಲ್ಲಿ ಕೋಮು ಸೂಕ್ಷ್ಮ ಪ್ರದೇಶವಾಗಿರುವ ನಗರದಾದ್ಯಂತ ಮಂಗಳೂರು ನಗರ ಪೊಲೀಸ್ ಹಾಗೂ ಕ್ಶಿಪ್ರ ಕಾರ್ಯಪಡೆ(ಆರ್ಎಎಫ್) ತುಕಡಿ ಜಂಟಿಯಾಗಿ ಪಥಸಂಚಲನ ನಡೆಸಿತು.