ಕುಂದಾಪುರ, ಆ 14 (DaijiworldNews/HR): ಕುಂದಾಪುರ ಕೋಡಿಯಲ್ಲಿ ಖಚಿತ ಮಾಹಿತಿಯ ಮೇರೆಗೆ ಉಡುಪಿ ಡಿಸಿಬಿಐ ಪೊಲೀಸರು ಕಾರ್ಯಾಚರಣೆ ನಡೆಸಿ 1 ಕೆ.ಜಿ.100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ ಘಟನೆ ನಡೆದಿದೆ.



ಬಂಧಿತ ಆರೋಪಿಯನ್ನು ಕೋಡಿಯ ಮೊಹಮ್ಮದ್ ಅಬ್ದುಲ್ ರೆಹಮಾನ್ (24) ಎಂದು ಗುರುತಿಸಲಾಗಿದೆ.
ಕೋಡಿಯ ಮೊಹಮ್ಮದ್ ಅಬ್ದುಲ್ ರೆಹಮಾನ್ ರಾತ್ರಿ 10 ಗಂಟೆಯ ನಂತರ ಮಸೂದ್ ಯಾನೆ ಚಿನ್ನು ಎಂಬವನಿಂದ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾ ತೆಗೆದುಕೊಂಡು ಅವನ ಮನೆಗೆ ಹೋಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು ರಾತ್ರಿ ಕೋಡಿ ಮುಲ್ಲಾ ಸ್ಟ್ರೀಟ್ 4 ನೇ ಕ್ರಾಸ್ ಬಳಿ ಕಾಯುತ್ತಿರುವಾಗ ಅಬ್ದುಲ್ ರೆಹಮಾನ್ ಕೈಯಲ್ಲಿ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಬಂದಿದ್ದು, ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.
ಗಾಂಜಾವನ್ನು ಕೋಡಿಯ ಮಸೂದ್ ಯಾನೆ ಚಿನ್ನು ಎಂಬವನಿಂದ ತೆಗೆದುಕೊಂಡು ಬಂದಿದ್ದು ಈಗ ಮನೆಯಲ್ಲಿಟ್ಟು ಮರುದಿನ ಅಧಿಕ ಬೆಲೆಗೆ ಮಾರಾಟ ಮಾಡಲಿಕ್ಕೆ ತೆಗೆದುಕೊಂಡು ಬಂದಿರುವುದಾಗಿ ಅಬ್ದುಲ್ ರೆಹಮಾನ್ ತಿಳಿಸಿದ್ದಾನೆ.
ಆರೋಪಿಯ ವಶದಲ್ಲಿದ್ದ 1 ಕೆ.ಜಿ.100 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಗಾಂಜಾದ ಅಂದಾಜು ಮೌಲ್ಯ 33,000/- ರೂಪಾಯಿ ಎಂದು ಅಂದಾಜಿಸಲಾಗಿದೆ. ಜೊತೆಗೆ 10,000 ರೂಪಾಯಿ ಮೌಲ್ಯದ ಮೊಬೈಲ್ ಪೋನನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಉಡುಪಿ ಡಿಸಿಐಬಿ ಇನ್ಸ್ ಪೆಕ್ಟರ್ ಮಂಜಪ್ಪ ಡಿ.ಆರ್, ಎಎಸ್ಐ ರವಿಚಂದ್ರ, ರಾಘವೇಂದ್ರ, ಸಂತೋಷ್ ಕುಂದರ್, ರಾಮು ಹೆಗ್ಡೆ, ಶಿವಾನಂದ, ಸುರೇಶ, ಚಂದ್ರ ಶೆಟ್ಟಿ, ರಾಜಕುಮಾರ, ದಯಾನಂದ ಪ್ರಭು, ಚಾಲಕ ರಾಘವೇಂದ್ರ ಮೊದಲಾದವರು ಭಾಗವಹಿಸಿದ್ದರು.