ಮಂಗಳೂರು, ಆ. 21 (DaijiworldNews/HR): ರಸ್ತೆ, ಫುಟ್ಪಾತ್ ಸೇರಿದಂತೆ ಮಂಗಳೂರು ನಗರದಲ್ಲಿ ಕೈಗೊಳ್ಳಲಾಗಿರುವ ಮೂಲಸೌಕರ್ಯಗಳಿಗೆ ಸಂಬಂಧಪಟ್ಟ ಕಾಮಗಾರಿಗಳನ್ನು ವಿಳಂಭವಿಲ್ಲದೆ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲೇಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳೂರು ಸ್ಮಾರ್ಟ್ಸಿಟಿ 9ನೇ ಅಂತರ್ ಇಲಾಖಾ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ರಸ್ತೆ ಅಗಲೀಕರಣ, ಫುಟ್ಪಾತ್, ಒಳಚರಂಡಿ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಾದ ನಗರದ ಕೆಲವು ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿದೆ. ಪುರಭವನದ ಮುಂಭಾಗದಲ್ಲಿ ಪಾದಾಚಾರಿ ಸುರಂಗ ಸೇತುವೆ ಕಾಮಗಾರಿ ನಗರದ ಹೃದಯಭಾಗದಲ್ಲಿ ನಡೆಯುತ್ತಿದ್ದರೂ, ಬೆರಳಣಿಕೆಯ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕಾಮಗಾರಿಯನ್ನು ತೀವ್ರಗೊಳಿಸಲು ಸೂಚಿಸಿದರು.
ಮಂಗಳೂರು ನಗರದ ಕೆಲವು ರಸ್ತೆ ಅಗಲೀಕರಣ ಕಾಮಗಾರಿಗಳು ಖಾಸಗೀ ಜಮೀನು ಸಮಸ್ಯೆಯಿಂದ ನೆನಗುದಿಗೆ ಬಿದ್ದಿದೆ. ಟಿಡಿಆರ್ ಅಡಿ ಜಮೀನು ನೀಡಲು ಜಮೀನು ಮಾಲೀಕರನ್ನು ಮಹಾನಗರಪಾಲಿಕೆ ಅಧಿಕಾರಿಗಳು ನಿರಂತರವಾಗಿ ಮನವೊಲಿಸಬೇಕು. ಮಹಾನಗರಪಾಲಿಕೆ ಆಯುಕ್ತರು ಈ ಬಗ್ಗೆ ಖುದ್ದು ಗಮನಹರಿಸಲು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು. ಸ್ಮಾರ್ಟ್ ರಸ್ತೆ ಯೋಜನೆಯಲ್ಲಿ ರಸ್ತೆ ಅಗಲೀಕರಣ, ಫುಟ್ಪಾತ್, ಚರಂಡಿ, ಕೇಬಲ್ ಡೆಕ್, ದಾರಿದೀಪ ಸೇರಿದಂತೆ ಸಮಗ್ರ ಕಾಮಗಾರಿಯನ್ನು ಸೇರಿಸಿ ಒಂದು ಯೋಜನೆ ರೂಪಿಸಬೇಕು.
ಹಂಪನಕಟ್ಟೆ ಹಳೇ ಸರ್ವೀಸ್ ಬಸ್ ನಿಲ್ದಾಣ ಜಾಗದಲ್ಲಿ ಬಹುಮಹಡಿ ಕಾರು ಪಾರ್ಕಿಂಗ್ ನಿರ್ಮಿಸಲು ಸ್ಮಾರ್ಟ್ ಸಿಟಿ ನಿರ್ದೇಶಕ ಮಂಡಳಿ ಸಭೆಯಲ್ಲಿ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಕಾಮಗಾರಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಅವರು ಸೂಚಿಸಿದರು. ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಕೆಳ ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಿಸಲು ರೈಲ್ವೇ ಇಲಾಖೆ 30 ಕೋಟಿ ರೂ. ಅಂದಾಜುಪಟ್ಟಿಗೆ ಒಪ್ಪಿಗೆ ನೀಡಲಾಗಿದ್ದು, ಈ ಸಂಬಂಧ ಈಗಾಗಲೇ ಮೊದಲ ಕಂತು ರೂ. 10 ಕೋಟಿ ಮೊತ್ತವನ್ನು ದಕ್ಷಿಣ ರೈಲ್ವೇಯಲ್ಲಿ ಠೇವಣಿ ಇಡಲಾಗಿದೆ. ಈ ಕಾಮಗಾರಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲು ರೈಲ್ವೇ ಅಧಿಕಾರಿಗಳೊಂದಿಗೆ ಮತ್ತೊಂದು ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಮಹಾನಗರಪಾಲಿಕೆ ವಿವಿಧ ವಾರ್ಡುಗಳಲ್ಲಿ ಒಳಚರಂಡಿ ಯುಜಿಡಿ ವಿಸ್ತರಣೆ ಕಾಮಗಾರಿ ಹಾಗೂ ಯುಜಿಡಿ ವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ನೂತನ ಒಳಚರಂಡಿ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಸೂಚಿಸಿದರು.
ಖಾಸಗಿ ಬಸ್ಗಳಲ್ಲಿ ಜಿಪಿಎಸ್ ಅಳವಡಿಸದಿದ್ದರೆ ಪರ್ಮೀಟ್ ರದ್ದುಮಂಗಳೂರು ಸ್ಮಾರ್ಟ್ಸಿಟಿ ಯೋಜನೆಯಡಿ ಏಕೀಕೃತ ಸಾರಿಗೆ ವ್ಯವಸ್ಥೆಗೆ ಕಮಾಂಡ್ ಕಂಟ್ರೋಲ್ ರೂಂ ತೆರೆಯಲಾಗಿದೆ. ಇದರಿಂದ ನಗರದಲ್ಲಿ ಸಂಚರಿಸುವ ವಾಹನಗಳ ಸಂಚಾರ ನಿರ್ವಹಣೆ ಟ್ರಾಕಿಂಗ್ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಸಂಚರಿಸುತ್ತಿರುವ ಖಾಸಗೀ ಬಸ್ಗಳಲ್ಲಿ ಜಿಪಿಎಸ್ ಕಡ್ಡಾಯವಾಗಿ ಅಳವಡಿಸಲು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದ ದ.ಕ. ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಿಗೆ ಸೂಚಿಸಿದರು.
ಸಾರ್ವಜನಿಕರ ಸುರಕ್ಷತೆ ಹಾಗೂ ನಗರದ ಸಂಚಾರ ನಿರ್ವಹಣೆ ಉತ್ತಮಪಡಿಸಲು ಖಾಸಗೀ ಬಸ್ಗಳಲ್ಲಿ ಜಿಪಿಎಸ್ ಅಳವಡಿಸುವುದು ಅಗತ್ಯವಾಗಿದೆ. ಈಗಾಗಲೇ ಕೆಲವು ಬಸ್ಗಳಲ್ಲಿ ಅಳವಡಿಸಿರುವ ಜಿಪಿಎಸ್ ಅನ್ನು ತೆಗೆದುಹಾಕಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಖಾಸಗೀ ಬಸ್ಗಳು ಜಿಪಿಎಸ್ ಅಳವಡಿಸದಿದ್ದರೆ, ಅಂತಹ ಬಸ್ಗಳ ಪರ್ಮೀಟ್ ರದ್ದುಪಡಿಸಲು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಸಭೆಯಲ್ಲಿ ಮಂಗಳೂರು ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ಅವರು ಸ್ಮಾರ್ಟ್ಸಿಟಿ ಕಾಮಗಾರಿಗಳ ಮಾಹಿತಿ ನೀಡಿದರು. ಮಹಾನಗರಪಾಲಿಕೆ ಆಯುಕ್ತ ದಿನೇಶ್ ಕುಮಾರ್, ಮಂಗಳೂರು ಉಪವಿಭಾಗಾಧಿಕಾರಿ ಮದನ್, ಡಿಸಿಪಿ ವಿನಯ್ ಗಾಂವ್ಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.