ಉಡುಪಿ, ಆ. 28 (DaijiworldNews/MB) : ದೈವಾರಾಧನೆ, ನೇಮೋತ್ಸವ, ಮಾರಿ ಪೂಜೆ ಮೊದಲಾದ ತುಳುನಾಡಿನ ಧಾರ್ಮಿಕ ಆಚರಣೆಗಳಿಗೆ ಅನುಮತಿ ನೀಡುವಂತೆ ಕೋರಿ ಶಾಸಕ ರಘುಪತಿ ಭಟ್ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸ್ಪಂಧನೆ ನೀಡಿದ್ದು ಅನುಮತಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿರುವ ಶಾಸಕ ರಘುಪತಿ ಭಟ್ ಅವರು, ''ದೈವಾರಾಧನೆ, ನೇಮೋತ್ಸವ, ಮಾರಿ ಪೂಜೆ, ಮೊದಲಾದ ತುಳುನಾಡಿನ ಧಾರ್ಮಿಕ ಆಚರಣೆಗಳನ್ನು ನಡೆಸಲು ನಾನು ಈ ಹಿಂದೆಯೇ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿರುವಂತೆ ಮುಖ್ಯಮಂತ್ರಿಯವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶಿಸಿದ್ದು, ತಕ್ಷಣ ಜಾರಿಗೆ ತರಲು ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಆಗ್ರಹಿಸುತ್ತೇನೆ'' ಎಂದು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ತುಳುನಾಡಿನ ಜನರು ತಮ್ಮದೇ ಆದ ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆ ಮತ್ತು ಸಂಸ್ಕೃತಿಯನ್ನು ರೂಡಿಸಿಕೊಂಡು ಬಂದಿದ್ದು ಲಾಕ್ಡೌನ್ ಕಾರಣದಿಂದ ಈ ಆಚರಣೆಗೆ ಧಕ್ಕೆ ಉಂಟಾಗಿದೆ. ಧಾರ್ಮಿಕ ಸೇವೆಗಳಿಗೆ ನಿಷೇಧ ಹೇರಿದ್ದರಿಂದ ತುಳು ನಾಡ ದೈವರಾಧಕರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟಾಗಿದ್ದಲ್ಲದೇ ದೈವ ಪರಿಚಾರಕರ ಅಂದರೆ ನಾಗಸ್ವರ ವಾದಕರು, ಮಡಿವಾಳ, ದರ್ಶನ ಪಾತ್ರಿ, ಮಧ್ಯಸ್ಥರು, ಗರೋಡಿ ವರ್ಗದವವರು, ನಲಿಕೆ ವರ್ಗ, ಪಂಬದ ವರ್ಗದವರು ಸೇರಿ ಸುಮಾರು 600 ಜನರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ> ಈ ಹಿನ್ನೆಲೆ ಈ ಆಚರಣೆಗಳಿಗೆ ಅವಕಾಶ ನೀಡಬೇಕು ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸಲು 10 ಸಾವಿರ ಅನುದಾನ ಮಂಜೂರು ಮಾಡಬೇಕು ಎಂದು ಶಾಸಕ ರಘುಪತಿ ಭಟ್ ಮನವಿ ಸಲ್ಲಿಸಿದ್ದರು.