ಮಲ್ಪೆ, ಸೆ.03 (DaijiworldNews/SM): ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ಮೀನು ಆಯುತ್ತಿದ್ದ 4 ಮಂದಿ ಮಕ್ಕಳನ್ನು ರಕ್ಷಿಸಿ, ಪುನರ್ ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಗಿದೆ.

ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೋಲಿಸ್ ಇಲಾಖೆ ಮಲ್ಪೆ, ಮಕ್ಕಳ ಸಹಾಯವಾಣಿ ಹಾಗೂ ಸ್ಪೂರ್ತಿ ವಿಶ್ವಾಸದ ಮನೆಯ ಸಹಯೋಗದೊಂದಿಗೆ ಇಲಾಖೆಯ ತಂಡವು ಕಾರ್ಯಾಚರಾಣೆ ನಡೆಸಿದೆ. ಈ ಸಂದರ್ಭ ಗದಗ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ವಲಸೆ ಕಾರ್ಮಿಕರ ಮೂವರು ಬಾಲಕರು ಮತ್ತು ಓರ್ವ ಬಾಲಕಿ ಸೇರಿದಂತೆ ಒಟ್ಟು 4 ಮಂದಿ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸ ಮಾಡಿದ್ದಲ್ಲಿ ಹಾಗೂ 14 ರಿಂದ 18 ವರ್ಷದೊಳಗಿನ ಬಾಲಕಾರ್ಮಿಕರು ಕಾರ್ಖಾನೆ, ಹೆಚ್ಚು ಸುಡುವ ದ್ರವ ತಯಾರಿ, ಗಣಿ ಕೆಲಸದಂತಹ ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡಿಸಿಕೊಂಡಲ್ಲಿ ಮಾಲೀಕರಿಗೆ 6 ತಿಂಗಳಿಂದ 2 ವರ್ಷದ ತನಕ ಜೈಲು ಹಾಗೂ 20000 ರೂಪಾಯಿಯಿಂದ 50000 ರೂಪಾಯಿ ತನಕ ದಂಡ ಅಥವಾ ಎರಡನ್ನು ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.
14 ವರ್ಷ ದೊಳಗಿನ ಮಕ್ಕಳನ್ನು ಮತ್ತು 15 ರಿಂದ 18 ವರ್ಷದೊಳಗಿನ ಬಾಲಕಾರ್ಮಿಕರನ್ನು ಕಾಯ್ದೆಯ ಪ್ರಕಾರ ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂದು ಕಾರ್ಮಿಕ ಇಲಾಖೆ ತಿಳುವಳಿಕೆ ನೀಡಿದೆ.