ಬೆಳ್ತಂಗಡಿ, ಸೆ 05 (DaijiworldNews/PY): ಈ ಸಾಲಿನ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ರಾಜ್ಯದ ಬೆಳ್ತಂಗಡಿಯ ನಾಡಾದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಯಾಕೂಬ್ ಅವರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ,ಸುಧಾಕರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಇವರೊಂದಿಗೆ, ಅಫ್ಜಲ್ಪುರದ ಬಂದರವಾಡದ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಶ್ರೀಮತಿ ಸುರೇಖಾ ಜಗನ್ನಾಥ್ ಹಾಗೂ ಬೆಂಗಳೂರಿನ ಜಾಲಹಳ್ಳಿ ಕೆ.ವಿ. ಮುಖ್ಯಶಿಕ್ಷಕಿ ಶ್ರೀಮತಿ ಚೆಮ್ಮಲಾರ್ ಶಣ್ಮುಗಮ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗೆ ದೇಶಾದ್ಯಂತ ಒಟ್ಟು 47 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಈ ಸಾಲಿನ ರಾಷ್ಟ್ರೀಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ರಾಜ್ಯದ ಬೆಳ್ತಂಗಡಿಯ ನಾಡಾದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಶ್ರೀ ಯಾಕೂಬ್, ಅಫ್ಜಲ್ಪುರದ ಬಂದರವಾಡದ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಶ್ರೀಮತಿ ಸುರೇಖಾ ಜಗನ್ನಾಥ್ & ಬೆಂಗಳೂರಿನ ಜಾಲಹಳ್ಳಿ ಕೆ.ವಿ. ಮುಖ್ಯಶಿಕ್ಷಕಿ ಶ್ರೀಮತಿ ಚೆಮ್ಮಲಾರ್ ಶಣ್ಮುಗಮ್ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಯಾಕುಬ್ ಅವರು ಶಿಕ್ಷಕರಾಗಿರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗಣಿತವನ್ನು ಸುಲಭವಾಗಿ ಕಲಿಯುವ ನಿಟ್ಟಿನಲ್ಲಿ ಸ್ಥಳೀಯರ ಸಹಾಯದಿಂದ ಗಣಿತ ಪ್ರಯೋಗಾಲಯವನ್ನು ಪ್ರಾರಂಭಿಸಿದ್ದು, ಶಿಕ್ಷಣ ಇಲಾಖೆಯ ಗಮನ ಸೆಳೆದಿದ್ದರು. ಯಾಕೂಬ್ ಅವರು ಮಾಡಿರುವ ಈ ಕಾರ್ಯ ರಾಜ್ಯಾದ್ಯಂತ ಗಮನ ಸೆಳೆದಿದ್ದು, ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನೂ ನೀಡಲಾಯಿತು.
1996 ರಲ್ಲಿ ಯಾಕೂಬ್ ಅವರು ತಮ್ಮ ಬೋಧನಾ ವೃತ್ತಿಯನ್ನು ಪ್ರಾರಂಭಿಸಿದರು. ಅಂದಿನಿಂದ ಅವರು ಬೋಧಿಸುತ್ತಿರುವ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಯಾಕೂಬ್ ಅವರು ಮಾಡಿದ ಸರಳ ಗಣಿತ ಬೋಧನೆಯ 300 ಕ್ಕೂ ಹೆಚ್ಚು ವೀಡಿಯೊಗಳು ಯೂಟ್ಯೂಬ್ನಲ್ಲಿ ಲಭ್ಯವಿದೆ.
ಯಾಕೂಬ್ ಅವರು ಕೊಯ್ಯೂರು ಉನ್ನಲು ನಿವಾಸಿಗಳಾದ ಇಸುಬು ಬ್ಯಾರಿ ಮತ್ತು ಅಲಿಮ್ಮಮ್ಮ ದಂಪತಿಯ ಪುತ್ರ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಊರಿನ ಶಾಲೆಯಲ್ಲಿ ಪೂರೈಸಿದರು. ನಂತರ ಇವರು ಮಂಗಳೂರಿನ ಸರ್ಕಾರಿ ಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದರು ಹಾಗೂ ನಡಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು 2007 ರಿಂದ 2012ರವರೆಗೆ ಅಕ್ಷರಾ ದಾಸೋಹಾ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.