ಉಡುಪಿ, ಸೆ 11 (DaijiworldNews/PY): ಉಡುಪಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಉಡುಪಿ ನಗರ ಹಾಗೂ ನಾಲ್ಕು ಪಂಚಾಯತ್ಗಳಿಗೆ ಪಕ್ಷದ ಆರೋಗ್ಯ ಹಸ್ತ ಕಾರ್ಯಕರ್ತರಿಗೆ ಆರೋಗ್ಯ ಕಿಟ್ ಅನ್ನು ನೀಡುವ ಹಾಗೂ ಅವರ ಕರ್ತವ್ಯದ ಬಗ್ಗೆ ಮಾಹಿತಿ ಕೊಡುವ ಕಾರ್ಯಾಗಾರ ಸೆ.10ರ ಗುರುವಾರ ಜರಗಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷದ ಕೊರೊನಾ ವಾರಿಯರ್ಸ್ ಕಾರ್ಯಕರ್ತರು ಮನೆ ಮನೆಗೆ ಬೇಟಿ ಕೊಟ್ಟು ತಮ್ಮ ತಮ್ಮ ವಾರ್ಡ್ಗಳಲ್ಲಿ ಜನರ ಆರೋಗ್ಯವನ್ನು ವಿಚಾರಿಸಿ ಕೊರೊನಾ ಬಗ್ಗೆ ಜಾಗೃತಿಯ ಕರಪತ್ರವನ್ನು ನೀಡಿ ಜ್ವರ ಇದ್ದವರನ್ನು ವೈದ್ಯರನ್ನು ಸಂಪರ್ಕಿಸುವಂತೆ ಮಾಹಿತಿ ನೀಡಿ ಜನ ಜಾಗ್ರತಿಗೊಳಿಸಬೇಕಾಗಿ ಕರೆ ನೀಡಿದರು.
ವೈದ್ಯರಾದ ಡಾ. ಗೋಪಾಲ ಪೂಜಾರಿ ಹಾಗೂ ಡಾ. ಸಂದೀಪ್ ಸನಿಲ್ ಅವರು ಕೊರೊನಾ ವೈರಸ್ ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗೃತೆಯ ಬಗ್ಗೆ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ಫೇಸ್ ಮಾಸ್ಕ್, ಥರ್ಮಲ್ ಸ್ಕ್ಯಾನರ್ ಮತ್ತು ಆಕ್ಸಿಪಲ್ಸ್ ಮೀಟರ್ ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಸಮಗ್ರ ಮಾಹಿತಿ ನೀಡಿದರು. ಜ್ವರ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗುವಂತೆ ಸಲಹೆ ನೀಡಿದರು.
ಉಡುಪಿ ಬ್ಲಾಕ್ ಸಂಯೋಜಕರಾದ ಮಂಗಳೂರಿನ ಕಾರ್ಪೊರೇಟರ್ ವಿನಯ ರಾಜ್ ಅವರು ಮಾತನಾಡಿ, ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಗ್ಯಹಸ್ತ ಕಾರ್ಯಕ್ರಮವನ್ನು ಪಕ್ಷಕ್ಕೆ ನೀಡುವ ಮೂಲಕ ರಾಜ್ಯದಾದ್ಯಂತ ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ಪ್ರತೀ ಬ್ಲಾಕ್ಗಳಿಗೆ ಆರೋಗ್ಯ ಹಸ್ತ ಕಿಟ್ಗಳನ್ನು ನೀಡುವ ಮೂಲಕ ಕಾರ್ಯಕರ್ತರಿಗೆ ಜನಸಾಮಾನ್ಯರ ಸಂಪರ್ಕಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಉಡುಪಿಯಲ್ಲಿ ಈ ಮೂಲಕ ಪಕ್ಷವನ್ನು ಸಂಘಟಿಸಲು ಕಾರ್ಯಕರ್ತರು ಶ್ರಮಿಸಬೇಕಾಗಿ ಅಲ್ಲದೆ ಆರೋಗ್ಯಹಸ್ತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕರೆ ಅವವರು, ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸುವಂತೆ ಕಾರ್ಯಕರ್ತರು ಶಕ್ತಿ ಮೀರಿ ದುಡಿಯಬೇಕು ಎಂದು ಅಭಿಪ್ರಾಯಪಟ್ಟರು. ಸುಮಾರು 30 ಮಂದಿಗೆ ಆರೋಗ್ಯ ಹಸ್ತ ಕಿಟ್ ಅನ್ನು ವಿತರಿಸಲಾಯಿತು.
ಈ ಸಂದರ್ಭ, ಸಂಯೋಜಕರಾದ ಸುಕುಮಾರ್, ಚಂದ್ರಿಕಾ ಶೆಟ್ಟಿ, ನಗರಸಭಾ ಸದಸ್ಯರಾದ ವಿಜಯ ಬೈಲೂರು, ಕೇಶವ ಎಂ. ಕೋಟ್ಯಾನ್, ಗಣೇಶ್ ನೆರ್ಗಿ, ಧನಂಜಯ ಕುಂದರ್, ಮಾಧವ ಬನ್ನಂಜೆ, ನಾರಾಯಣ ಕುಂದರ್, ಶ್ರೀನಿವಾಸ್ ಹೆಬ್ಬಾರ್ ಹಾಗೂ ಪಕ್ಷದ ಕೊರೊನಾ ವಾರಿಯರ್ಸ್ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಪ್ರಾರಂಭದಲ್ಲಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.