ಪುತ್ತೂರು, ಸೆ. 24 (DaijiworldNews/SM): ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಮಾಂಗಲ್ಯ ಸರ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸಹಿತ ಒಟ್ಟು ನಾಲ್ವರು ಆರೋಪಿಗಳನ್ನು ವಿಟ್ಲ ಎಸ್ಐ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪುತ್ತೂರು ತಾಲೂಕಿನ ಸವಣೂರು ನಿವಾಸಿಗಳಾದ ಮಹಮ್ಮದ್ ಶಾಕೀರ್(23), ಮಹಮ್ಮದ್ ಇಕ್ಬಲ್(24), ಕೆ.ಎ. ಮಹಮ್ಮದ್ ಯಾನೆ ಐಟಿ ಮಮ್ಮು(41) ಆರೋಪಿಗಳಿಗೆ ಸಹಕರಿಸಿದ ತಿಂಗಳಾಡಿ ನಿವಾಸಿ ಹಾಜೀರಾ(44) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 20,650 ನಗದು ಕುಂಬ್ರದ ಬ್ಯಾಂಕ್ ನಲ್ಲಿ ಅಡವಿಟ್ಟ ಕಳವುಗೈದ ಚಿನ್ನ, ಆಕ್ಟೀವ್ ಹೋಂಡಾ ವಾಹನವನ್ನು ವಶಪಡಿಸಲಾಗಿದೆ.
ಸೆಪ್ಟೆಂಬರ್ 22ರಂದು ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಸಮೀಪದ ಮರುವಾಳ ನಿವಾಸಿ ತೋಮಸ್ ರೆಬೆಲ್ಲೋರವರ ಪತ್ನಿ ಮಿನೆಜಸ್ ಎಂಬವರು ಸೆಪ್ಟೆಂಬರ್ 22ರಂದು ಮಧ್ಯಾಹ್ನದ ವೇಳೆ ಬೀಡಿಕೊಟ್ಟು ಮನೆಗೆ ಹಿಂದಿರುಗುತ್ತಿದ್ದ ವೇಳೆ ಕುಂಡಡ್ಕ ಭಾಗದಿಂದ ದ್ವಿಚಕ್ರವಾಹನದಲ್ಲಿ ಬಂದ ವ್ಯಕ್ತಿಯೋರ್ವ ಕುತ್ತಿಗೆಯಲ್ಲಿದ್ದ 4 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದು ಪರಾರಿಯಾಗಿದ್ದ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಅಳಕೆಮಜಲು ಸಮೀಪ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕ ನಾಗರಾಜ್ ಟಿ.ಡಿ ಮಾರ್ಗದರ್ಶನದಲ್ಲಿ ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ, ಡಿಸಿಐಬಿ ತಂಡದ ಪ್ರವೀಣ್ ರೈ, ವಿಟ್ಲ ಪೊಲೀಸ್ ಠಾಣೆಯ ಪ್ರಸನ್ನ, ಗಿರೀಶ್, ಲೋಕೇಶ್ ,ವಿನಾಯಕ, ಪ್ರತಾಪ್ ರೆಡ್ಡಿ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.