ಮಣಿಪಾಲ, ಸೆ 25(DaijiworldNews/PY): ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರವು, ಇತ್ತೀಚೆಗೆ ದಾನಿಗಳ ಪ್ಲಾಸ್ಮಾಫೆರೆಸಿಸ್ ಮಾಡಲು ಪರವಾನಗಿ ಪಡೆದಿದ್ದು ಈಗ ಅಗತ್ಯವಿರುವ ರೋಗಿಗಳಿಗೆ ಅನುಕೂಲಕರ ಪ್ಲಾಸ್ಮಾವನ್ನು ಒದಗಿಸಲು ಪ್ಲಾಸ್ಮಾ ಬ್ಯಾಂಕ್ ಅನ್ನು ಪ್ರಾರಂಭಿಸಿದೆ ಎಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ತಿಳಿಸಿದರು.

ಕೊರೊನಾದಿಂದ ಚೇತರಿಸಿಕೊಂಡ ರೋಗಿಗಳಿಂದ ಪಡೆದ ಪ್ಲಾಸ್ಮವನ್ನು ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆಯಾಗಿ ಬಳಸಬಹುದು. ಸುಸ್ಥಿರ ಪ್ಲಾಸ್ಮಾದಲ್ಲಿ ವೈರಸ್ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳು ಇರುತ್ತವೆ, ಆದ್ದರಿಂದ ವೈರಸ್ ಕಣಗಳನ್ನು ತಟಸ್ಥಗೊಳಿಸುವ ಮೂಲಕ ರೋಗಿಗೆ ಪ್ರಯೋಜನವಾಗುವ ಸಾಧ್ಯತೆಯಿದೆ ಎಂದೂ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ. ಶಮೀ ಶಾಸ್ತ್ರಿ ಅವರು, ಸಮಗ್ರ ತಪಾಸಣೆಯ ನಂತರ, ನಾವು ನಿಯಂತ್ರಕ ಮಾರ್ಗಸೂಚಿಗಳ ಪ್ರಕಾರ ಅರ್ಹ ದಾನಿಗಳಿಂದ ಪ್ಲಾಸ್ಮಾವನ್ನು ಸಂಗ್ರಹಿಸುತ್ತೇವೆ ಮತ್ತು ಕ್ಲಿನಿಕಲ್ ಬೇಡಿಕೆಯ ಆಧಾರದ ಮೇಲೆ ದಾಸ್ತಾನು ಕಾರ್ಯವನ್ನು ನಿರ್ವಹಿಸಲಾಗುವುದು ಎಂದು ಹೇಳಿದರು.
ರೋಗಲಕ್ಷಣಗಳಿಂದ ಸಂಪೂರ್ಣವಾಗಿ ಮುಕ್ತವಾದ 28 ದಿನಗಳ ನಂತರ 18-60 ವರ್ಷ ವಯಸ್ಸಿನ ಜನರು ಪ್ಲಾಸ್ಮಾ ದಾನಿಯಾಗಿ ನೋಂದಾಯಿಸಿಕೊಳ್ಳಬಹುದು. ದಾನಿಗಳ ತಪಾಸಣೆ ಮುಖ್ಯವಾಗಿ, ದೈಹಿಕ ಪರೀಕ್ಷೆ, ಕೊರೊನಾಗೆ ಪ್ರತಿಕಾಯದ ಗರಿಷ್ಠ ಮಟ್ಟವನ್ನು ಪರಿಶೀಲಿಸುವುದು, ರಕ್ತ ಗುಂಪು, ವರ್ಗಾವಣೆಯಿಂದ ಹರಡುವ ಸೋಂಕಿನ ತಪಾಸಣೆ ಮತ್ತು ಒಟ್ಟು ಸೀರಮ್ ಪ್ರೋಟೀನ್ ಮಟ್ಟವನ್ನು ಅಂದಾಜು ಮಾಡುವುದು ಸೇರಿದೆ. ಪ್ಲಾಸ್ಮಾಫೆರೆಸಿಸ್ ವಿಧಾನವು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಅರ್ಹ ದಾನಿಗಳು ತಿಂಗಳಲ್ಲಿ ಎರಡು ಬಾರಿ ದಾನ ಮಾಡಬಹುದು ಮತ್ತು ಇದು ಪಾಕ್ಷಿಕವಾಗಿ ವರ್ಷಕ್ಕೆ 24 ಬಾರಿಗಿಂತ ಹೆಚ್ಚಾಗಬಾರದು ಎಂದು ಹೇಳಿದರು.
ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಮಣಿಪಾಲ ಡೀನ್ ಡಾ.ಶರತ್ ಕೆ ರಾವ್ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿ ಸಿ ಜಿ ಮುತ್ತನ್ನ ಅವರು ಪ್ಲಾಸ್ಮಾ ಬ್ಯಾಂಕ್ ಅನ್ನು ಪ್ರಾರಂಭಿಸಲು ಶ್ರಮಿಸಿದ ಇಡೀ ತಂಡವನ್ನು ಅಭಿನಂದಿಸಿದರು.
ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರವು, ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಗಳು ಪ್ಲಾಸ್ಮಾ ದಾನಕ್ಕೆ ಮುಂದೆ ಬರುವ ಮೂಲಕ ಈ ಉದಾತ್ತ ಕಾರ್ಯಕ್ಕೆ ನೋಂದಾಯಿಸಿಕೊಳ್ಳುವಂತೆ ವಿನಂತಿಸಿದೆ. ಹೆಚ್ಚಿನ ಮಾಹಿತಿಗೆ ದೊರವಾಣಿ ಸಂಖ್ಯೆ 0820 2922331 ಸಂಪರ್ಕಿಸಬಹುದು.