ಮಂಗಳೂರು, ಸೆ. 28 (DaijiworldNews/MB) : ಕೃಷಿ ಮಸೂದೆಗಳ ತಿದ್ದುಪಡಿಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್ಗೆ ಬೆಂಬಲಿಸಿ ಸಮಾನ ಮನಸ್ಕ ಸಂಘಟನೆಗಳು ನಗರದ ಹಂಪನಕಟ್ಟೆಯ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದವು. ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.





ಕಾಂಗ್ರೆಸ್, ಸಿಪಿಐ (ಎಂ), ಜೆಡಿ (ಎಸ್) ಪಕ್ಷಗಳು ಈ ಪ್ರತಿಭಟನೆಗೆ ಬೆಂಬಲ ನೀಡಿದೆ. ಯುವ, ಮಹಿಳಾ ಮತ್ತು ಕಾರ್ಮಿಕ ಸಂಘಟನೆಗಳು, ಡಿವೈಎಫ್ಐ, ಸಿಐಟಿಯು ಮತ್ತು ದಲಿತ ಸಂಘಟನೆಗಳು ಕೂಡಾ ಈ ಪ್ರತಿಭಟನೆಗೆ ಬೆಂಬಲ ನೀಡಿದೆ.
ಜಿಲ್ಲಾ ರೈತ ಸಂಘದ ಮುಖಂಡ ಕೃಷ್ಣಪ್ಪ ಸಾಲಿಯನ್ ಅವರು ಮಾತನಾಡಿ, "ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕೃಷಿ ಮಸೂದೆ ಹೂಡಿಕೆದಾರರು ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ರಕ್ಷಿಸುತ್ತದೆ. ಕಾಯ್ದೆಗೆ ತಿದ್ದುಪಡಿ ಮಾಡುವ ಮೊದಲು ಯಾವುದೇ ಚರ್ಚೆ ನಡೆಸದೆ ಸರ್ಕಾರ ನಮ್ಮ ಹಕ್ಕುಗಳನ್ನು ಕಸಿದುಕೊಂಡಿದೆ. ಈ ಕಾಯ್ದೆಯಿಂದಾಗಿ ಕೃಷಿಯನ್ನೇ ತ್ಯಜಿಸುವಂತಹ ಪರಿಸ್ಥಿತಿ ಉಂಟಾಗುತ್ತದೆ. ಬಿ ಎಸ್ ಯಡಿಯೂರಪ್ಪನವರು ಹಸಿರು ಶಾಲು ಧರಿಸಿ ರೈತ ಪರ ಎಂದು ಬಿಂಬಿಸಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಇಂದು ಸರ್ಕಾರ ರೈತ ವಿರೋಧಿಯಾಗಿದೆ ಎಂದು ಸಾಬೀತುಪಡಿಸಿದೆ ಎಂದು ಹೇಳಿದರು.
ಮಾಜಿ ಎಂಎಲ್ಸಿ ಐವಾನ್ ಡಿಸೋಜಾ ಅವರು ಮಾತನಾಡಿ, "ರೈತ ವಿರೋಧಿ ಕೃಷಿ ಮಸೂದೆಗಳನ್ನು ಅಂಗೀಕರಿಸಿದ್ದಕ್ಕಾಗಿ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಎಲ್ಲಾ ಸಂಘಟನೆಗಳು ಕೈಜೋಡಿಸಿವೆ. ಯಾವುದೇ ಸಮಾಲೋಚನೆ ಅಥವಾ ಚರ್ಚೆಯಿಲ್ಲದೆ ಕಾನೂನು ತಿದ್ದುಪಡಿ ಮಾಡಲಾಗಿದೆ. ಸರ್ಕಾರ ಹೂಡಿಕೆದಾರರ ಪರವಾಗಿದ್ದು ರೈತರ ಆರ್ಥಿಕ ಬದುಕನ್ನು ನಾಶಪಡಿಸುತ್ತಿದೆ. ಕಾನೂನು ಬಂಡವಾಳದಾರರಿಗೆ ದಾರಿ ಮಾಡಿಕೊಡುತ್ತದೆ. ರೈತರ ಜೀವನೋಪಾಯದ ಬಾಗಿಲು ಮುಚ್ಚಿ ಅವರ ಉದ್ಯೋಗವನ್ನೇ ಕಸಿದುಕೊಳ್ಳುತ್ತದೆ ಎಂದು ಹೇಳಿದರು.
ಕಾನೂನು ಸರಿಯಾಗಿದ್ದರೆ ಮತ್ತು ರೈತರಿಗೆ ಅನುಕೂಲಕರವಾಗಿದ್ದರೆ, ಹರ್ಸಿಮ್ರತ್ ಕೌರ್ ಬಾದಲ್ ಅವರು ನರೇಂದ್ರ ಮೋದಿ ಸಚಿವ ಸಂಪುಟಕ್ಕೆ ಯಾಕೆ ರಾಜೀನಾಮೆ ನೀಡಿದರು? ಸಂಪುಟದಲ್ಲಿ ಈ ರೈತ ವಿರೋಧಿ ಕೃಷಿ ಮಸೂದೆಗಳಿಗೆ ಯಾವುದೇ ಬೆಂಬಲವಿಲ್ಲ ಎಂದು ಇದು ಸೂಚಿಸುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಈ ಸರ್ಕಾರ ರೈತರಿಗೆ ದ್ರೋಹ ಮಾಡಿದೆ ಎಂದು ಹೇಳಿದರು.
ಜಿಲ್ಲಾ ಹಸಿರು ಸೇನೆ ಮುಖಂಡರಾದ ರವಿಕಿರಣ ಪುಣಚ, ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಜೆಡಿ (ಎಸ್) ಮುಖಂಡೆ ಸುಮತಿ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಸದಾಶಿವ ಉಳ್ಳಾಲ, ಪಿ.ವಿ.ಮೋಹನ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶಾಲೆಟ್ ಪಿಂಟೊ, ಸಿಐಟಿಯು ಮುಖಂಡರಾದ ಜೆ ಬಾಲಕೃಷ್ಣ, ಜೆಎಂಎಸ್ ಮುಖಂಡೆಯರಾದ ಭಾರತಿ ಬೋಳಾರ್, ಜಯಂತಿ ಶೆಟ್ಟಿ ಉಪಸ್ಥಿತರಿದ್ದರು.