ಮಂಗಳೂರು, ಅ. 02 (DaijiworldNews/SM): ಡ್ರಗ್ಸ್ ಪ್ರಕರಣ ದಿನಕ್ಕೊಂದು ಹೊಸ ಆಯಾಮವನ್ನು ಪಡೆಯುತ್ತಿದೆ. ಡ್ರಗ್ಸ್ ಮಟ್ಟ ಹಾಕುವ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನಗಳು ನಡೆಯುತ್ತಿವೆ. ಕರಾವಳಿಯಲ್ಲೂ ಡ್ರಗ್ಸ್ ನ ಕೆಲವೊಂದು ಕೈಗಳಿದ್ದು ಇದರ ವಿರುದ್ಧ ಸಂಪೂರ್ಣ ಸಮರ ಸಾರಲು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ, ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ರಾಜೇಂದ್ರ ನಾಯಕ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಡ್ರಗ್ಸ್ ಪ್ರಕರಣ ತನಿಖೆಗೆ ಸಂಬಂಧಿಸಿದಂತೆ ಸಿಸಿಬಿ ಇನ್ಸ್ಪೆಕ್ಟರ್ ಆಗಿದ್ದ ಶಿವಪ್ರಕಾಶ್ ರಾಜೇಂದ್ರ ನಾಯಕ್ ಅವರು ತನಿಖಾಧಿಕಾರಿಯಾಗಿದ್ದರು. ಇವರ ನೇತೃತ್ವದಲ್ಲಿ ತನಿಖೆ ಮುಂದುವರೆಸಲಾಗಿತ್ತು. ಡ್ರಗ್ಸ್ ಜಾಲದ ವಿರುದ್ಧ ಶಿವಪ್ರಕಾಶ್ ಸಮರ ಸಾರಿದ್ದರು. ಆದರೆ, ಈ ನಡುವೆ ದಿಢೀರ್ ಆಗಿ ಶಿವಪ್ರಕಾಶ್ ಅವರನ್ನು ಸಿಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.
ಹಠಾತ್ ಲೋಕಾಯುಕ್ತಕ್ಕೆ ವರ್ಗಾವಣೆ ಯಾಕೆ?
ಡ್ರಗ್ಸ್ ಪ್ರಕರಣದ ವಿಚಾರಣೆ ಮುಂದುವರೆಯುತ್ತಿದ್ದು, ಪ್ರಮುಖ ಆರೋಪಿಗಳನ್ನು ವಿಚಾರಣೆ ನಡೆಸಿದ್ದ ಸಂದರ್ಭದಲ್ಲೇ ಶಿವಪ್ರಕಾಶ್ ಅವರನ್ನು ದಿಢೀರನೆ ವರ್ಗಾವಣೆ ಮಾಡಿರುವುದೇಕೆ ಎಂಬುವುದು ಇದೀಗ ಪ್ರಶ್ನೆಯಾಗಿದ್ದು, ಹಲವು ರೀತಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪಾರದರ್ಶಕ ತನಿಖೆ ನಡೆಸುತ್ತಿದ್ದ ಅಧಿಕಾರಿಯ ವರ್ಗಾವಣೆಗೆ ನಾಗರಿಕ ಸಮಾಜ ಆಕ್ರೋಶ ವ್ಯಕ್ತಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಹಾದಿ ತಪ್ಪಬಹುದೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಈ ಹಿಂದೆ ಇದ್ದ ಅಧಿಕಾರಿ ವಿವಿಧ ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸಿ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಮತ್ತಷ್ಟು ವ್ಯಕ್ತಿಗಳ ಬಂಡವಾಳ ಬಹುರಂಗ ಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಆದರೆ, ಅವರ ಸ್ಥಾನಕ್ಕೆ ಹೊಸ ಅಧಿಕಾರಿಯನ್ನೇನೋ ನೇಮಕ ಮಾಡಲಾಗಿದೆ. ಆದರೆ, ಈ ಹಿಂದಿನ ಅಧಿಕಾರಿ ನಡೆಸಿದ ಶ್ರಮ ವ್ಯರ್ಥವಾಗುತ್ತಾ? ಹೊಸ ಅಧಿಕಾರಿ ಹೊಸದಾಗಿ ಅಧ್ಯಯನ ನಡೆಸಿ ತನಿಖೆಗೆ ಇಳಿಯುವ ಸಂದರ್ಭ ಸಾಕ್ಷ್ಯ ನಾಶದ ಸಾಧ್ಯತೆಗಳಿದೆಯೇ ಎನ್ನುವ ಅನುಮಾನ ಕಾಡುತ್ತಿದೆ.
ಆದರೆ, ಈ ಹಿಂದೆ ನಡೆಯುತ್ತಿದ್ದ ತನಿಖೆಯಂತೆ ವೇಗದ ಕಾರ್ಯಾಚರಣೆ ಮುಂದೆಯೂ ನಡೆಯಬೇಕಿದ್ದು, ಡ್ರಗ್ಸ್ ಜಾಲಕ್ಕೆ ಹೆಡೆಮುರಿ ಕಟ್ಟಬೇಕಾಗಿದೆ.
ನಿರೂಪಕಿ ಅನುಶ್ರೀಗೆ ಸಮನ್ಸ್ ನೀಡಿದ್ದರು:
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಶ್ರೀಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಮಾಡಿದ್ದು, ಮಂಗಳೂರು ಕೇಂದ್ರ ಅಪರಾಧ ವಿಭಾಗದಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಶಿವಪ್ರಕಾಶ್ ನಾಯ್ಕ್ ಅವರು. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ಯಾನ್ಸರ್ ಕಿಶೋರ್ ಬಂಧನ, ಕಿಶೋರ್ ಆಪ್ತರ ಹೇಳಿಕೆ ಆಧಾರದ ಮೇಲೆ ನಿರೂಪಕಿ ಅನುಶ್ರೀಗೆ ವಿಚಾರಣೆಗೆ ಸಮನ್ಸ್ ನೀಡಲಾಗಿತ್ತು. ಅದರಂತೆ ಮಂಗಳೂರಿಗೆ ಬಂದು ಅನುಶ್ರೀ ವಿಚಾರಣೆ ಎದುರಿಸಿದ್ದರು. ಆದರೆ, ಅದರೆ, ನಡುವೆ ಕೆಲವಾರು ಸುದ್ದಿಗಳು ಹರದಾಡಿದ್ದು, ಸ್ವತಃ ಅನುಶ್ರೀ ತನ್ನ ತೇಜೋವಧೆ ಮಾಡಲಾಗಿದೆ ಎಂದಿದ್ದರು.