ಕಾಪು, ಅ. 03 (DaijiworldNews/MB) : ಗಾಂಜಾ ಮಾರಾಟ ಮಾಡಲು ತೆರಳುತ್ತಿದ್ದ ಆರೋಪದಲ್ಲಿ ಕಾಪು ಪೊಲೀಸ್ ಠಾಣೆಯ ಸಿಬ್ಬಂದಿ, ಅಕ್ಟೋಬರ್ 2 ಶುಕ್ರವಾರ ಮಧ್ಯಾಹ್ನ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಪುತ್ತೂರಿನ ಕುಕ್ಕಂಜೆ ರಸ್ತೆ ಬಳಿಯ ಎಲ್ವಿಟಿ ಬಸ್ ನಿಲ್ದಾಣದ ಸಮೀಪದ ನಿವಾಸಿ ಮೊಹಮ್ಮದ್ ಆಲಿ (33) ಹಾಗೂ ಕುಂಜಿಬೆಟ್ಟುವಿನ ಪೆರಂಪಲ್ಲಿ ನಿವಾಸಿ ಶ್ರೀಧರ್ (32) ಎಂದು ಗುರುತಿಸಲಾಗಿದೆ.

ಉದ್ಯಾವರದ ಜೈಹಿಂದ್ ಕಾಂಪ್ಲೆಕ್ಸ್ ಬಳಿ ಗಾಂಜಾ ಹೊಂದಿರುವ ಇಬ್ಬರು ಕಾರಿನಲ್ಲಿ ಇದ್ದಾರೆ ಎಂದು ಖಚಿತ ಮಾಹಿತಿ ದೊರೆತ ಮೇರೆಗೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರು ಸಿಬ್ಬಂದಿಗಳೊಂದಿಗೆ ಅಲ್ಲಿಗೆ ತೆರಳಿದ್ದು ಕಾರಿನೊಳಗೆ ಇಬ್ಬರು ಕೂತಿರುವುದು ಕಂಡು ಬಂದಿದೆ. ಬಳಿಕ ಸಾಕ್ಷಿ ದೊರೆತ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದರು.
ಆರೋಪಿಗಳ ತೀವ್ರ ವಿಚಾರಣೆ ನಡೆಸಿದಾಗ ತಾವು ಮಣಿಪಾಲ, ಮಲ್ಪೆಯಲ್ಲಿ ಗಾಂಜಾ ಮಾರಾಡ ಮಾಡಿದ್ದೇವೆ. ಇನ್ನುಳಿದ ಗಾಂಜಾವನ್ನು ಉದ್ಯಾವರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದೆವು ಎಂದು ತಿಳಿಸಿದ್ದಾರೆ.
ಇನ್ನು ಆರೋಪಿಗಳ ಡ್ರಗ್ ಪರೀಕ್ಷೆ ನಡೆಸಲು ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪತ್ರಾಂಕಿತ ಅಧಿಕಾರಿಯವರ ಅಗತ್ಯತೆ ಇದ್ದುದರಿಂದ ಕಾಪುವಿನ ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರನ್ನು ಆರೋಪಿಗಳ ಅಂಗ ಶೋಧನೆ ಮಾಡಿಸಿ ತನಿಖೆಗೆ ಸಹಕರಿಸುವಂತೆ ಕೋರಲಾಗಿದೆ. ಬಳಿಕ ಆರೋಪಿಗಳನ್ನು ಬಂಧಿಸಲಾಗಿದ್ದು ಕಾರಿನಲ್ಲಿದ್ದ ಸುಮಾರು 1.125 ಕೆಜಿ ತೂಕದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಬಳಸಿದ ತೂಕದ ಯಂತ್ರ ಮತ್ತು ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಟವೆರಾ ಕಾರನ್ನು, ಎರಡು ಮೊಬೈಲ್ ಫೋನ್ಗಳು, ಹಾಗೆಯೇ ಆರೋಪಿಗಳು ಧರಿಸಿದ್ದ ಬಟ್ಟೆಯಲ್ಲಿ ದೊರೆತ ಕೆಲವು ಸಣ್ಣ ಗಾಂಜಾ ಪ್ಯಾಕೆಟ್ಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.