ಮಂಗಳೂರು, ಅ. 05 (DaijiworldNews/MB) : ಕೊರೊನಾ ಸೊಂಕು ನಿಯಂತ್ರಣಕ್ಕೆ ಸಂಬಂಧಿಸಿದ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧರಿಸಿದ್ದು ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸುವವರು ಇನ್ನು ಮುಂದೆ ಬಹಳ ಎಚ್ಚರವಾಗಿರಬೇಕಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದೆ ಸಿಕ್ಕಿಬಿದ್ದವರು ಅಕ್ಟೋಬರ್ 5 ಸೋಮವಾರದಿಂದ, ಭಾರೀ ದಂಡ ಪಾವತಿಸಬೇಕಾಗುತ್ತದೆ.

ಪ್ರಾತಿನಿಧಿಕ ಚಿತ್ರ
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಕೊರೊನಾ ನಿಯಂತ್ರಣದ ಹಿನ್ನೆಲೆ ಜಿಲ್ಲಾಡಳಿತ ಈಗಾಗಲೇ ಅಧಿಕಾರಿಗಳಿಗೆ ಅಧಿಕೃತ ಸೂಚನೆಗಳನ್ನು ನೀಡಿದೆ. ರಾಜ್ಯ ಸರ್ಕಾರದ ಸೂಚನೆಯಂತೆ, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ ಜನರಿಗೆ 1,000 ರೂ.ಗಳ ದಂಡ ಮತ್ತು ಇತರ ಸ್ಥಳಗಳಲ್ಲಿ ಮಾಸ್ಕ್ ಹಾಕದವರಿಗೆ 500 ರೂ. ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.'
ಈವರೆಗೆ ಮಾಸ್ಕ್ ಧರಿಸದವರಿಗೆ 200 ರೂ. ದಂಡ ವಿಧಿಸಲಾಗುತ್ತಿತ್ತು.
ಇನ್ನು ನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸೋಮವಾರದಿಂದ ನಗರ ಪಾಲಿಕೆ ಮಿತಿಯೊಳಗೆ ಮಾಸ್ಕ್ ಧರಿಸದವರಿಗೆ ಅಧಿಕ ದಂಡವನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಪರಿಷ್ಕೃತ ದಂಡ ಜಾರಿಗೆ ಬಂದಿದ್ದು, ಭಾನುವಾರದಿಂದಲೇ ಮಾಸ್ಕ್ ಧರಿಸದವರಿಗೆ 500 ರೂ.ಗಳ ದಂಡ ವಿಧಿಸಲಾಗಿದೆ ಎಂದು ಉಡುಪಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.
ಕೊರೊನಾ ಜಾಗೃತಿ ಅಭಿಯಾನವನ್ನು ಆಗಾಗೇ ಕೈಗೊಂಡಿದ್ದರೂ ಕೂಡಾ ಜನರು ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ದಂಡವನ್ನು ಹೆಚ್ಚಿಸಿದೆ. ದಂಡದ ಹೆಚ್ಚಳದಿಂದಾದರೂ ಜನರು ಮಾರ್ಗಸೂಚಿಗಳನ್ನು ಪಾಲಿಸುತ್ತಾರೆ ಎಂಬ ನಿರೀಕ್ಷೆ ಸರ್ಕಾರಕ್ಕಿದೆ.