ಮಂಗಳೂರು, ಅ. 12 (DaijiworldNews/PY): ಜಿಲ್ಲೆಯಲ್ಲಿ ಹಲವು ಸರಕಾರಿ ಕಚೇರಿಗಳಲ್ಲಿ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಮುಲ್ಕಿ ಮೂಡುಬಿದಿರೆ ಶಾಸಕ ಉಮನಾಥ್ ಕೋಟ್ಯಾನ್ ಇವರ ವಿನಂತಿಯ ಮೇರೆಗೆ ಜಿಲ್ಲಾ ಕಾರ್ಯದರ್ಶಿ ಪೊನ್ನುರಾಜ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಮೇಯರ್ ದಿವಾಕರ್ ಪಾಂಡೇಶ್ವರ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಅಕ್ಷಯ್ ಶ್ರೀಧರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್ ಇವರ ಉಪಸ್ಥಿತಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಕಾನ್ಫರೆನ್ಸ್ ಹಾಲ್ನಲ್ಲಿ ಅ.10ರ ಶನಿವಾರದಂದು ವಿಸ್ತ್ರತವಾಗಿ ಚರ್ಚೆ ನಡೆಯಿತು.





ಚರ್ಚೆಯಲ್ಲಿ, ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಜನರಿಗಾಗುವ ತೊಂದರೆಗಳು, ಸಬ್ ರಿಜಿಸ್ಟರ್ ಆಫೀಸಿನಲ್ಲಿ ಸರ್ವರ್ ನೆಟ್ ವರ್ಕ್ ಸಮಸ್ಯೆಗಳು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಖಾತಾದಿಂದಾಗುವ ಪರಿಣಾಮಗಳು, ಮರಳು ಸಮಸ್ಯೆ, ಯು.ಜಿ.ಡಿ ಸಮಸ್ಯೆ, ಅಗ್ನಿಶಾಮಕ ದಳದ ಸಮಸ್ಯೆ, ಗಣಿ ಅಧಿಕಾರಿಗಳಿಂದ ಆಗುವ ತೊಂದರೆಗಳು, ಘನತ್ಯಾಜ್ಯ ಸಮಸ್ಯೆ, ಫಾರಂ ನಂ 9,11 ಸಮಸ್ಯೆ, ಮೂಡುಬಿದಿರೆ ತಾಲೂಕಿನಲ್ಲಿ ಕಟ್ಟಡ ಕಟ್ಟಲು ಇರುವ ಸಮಸ್ಯೆ ಮುಂತಾದವುಗಳ ಬಗ್ಗೆ ಧರ್ಮರಾಜ್, ಕ್ರೆಡೈ ಅಧಿಕಾರಿಗಳು, ಸಾರ್ವಜನಿಕರ ಪೈಕಿ ಜಿ.ಕೆ ಭಟ್,ನ್ಯಾಯವಾದಿ ಸತೀಶ್ ಭಟ್, ನಯನಾ ಪೈ,ಮಿತ್ರಾ ಬಾಯಿ ಮುಂತಾದವರು ಜಿಲ್ಲಾ ಕಾರ್ಯದರ್ಶಿಗಳಿಗೆ ತಿಳಿಸಿದರು. ಅಲ್ಲದೇ, ತೊಂದರೆಗಳ ಬಗ್ಗೆ ಮತ್ತು ಅದನ್ನು ಯಾವ ರೀತಿಯಲ್ಲಿ ಸರಿಪಡಿಸಬಹುದು ಎನ್ನುವ ಕುರಿತು ಚರ್ಚೆ ನಡೆಯಿತು.
ಶಾಸಕರಾದ ವೇದವ್ಯಾಸ್ ಕಾಮತ್, ಡಾ ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್ ಈ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಮನಪಾ ಆಯುಕ್ತರಿಗೆ ಒತ್ತಾಯಿಸಿದರು. ಜಿಲ್ಲಾ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಮನಪಾ ಆಯುಕ್ತರು ಈ ಬಗ್ಗೆ ಭರವಸೆ ನೀಡಿದರು.ಈ ಸಂದರ್ಭ, ನಗರದಲ್ಲಿ ಕಿಯೊನಿಕ್ಸ್ ಪ್ರಾಯೋಜಿತ ಐ.ಟಿ ಪಾರ್ಕ್ ಸ್ಥಾಪಿಸುವ ಬಗ್ಗೆ ಕೂಡ ಚರ್ಚೆ ನಡೆಯಿತು.