ಮಂಗಳೂರು, ಅ. 21 (DaijiworldNews/MB) : ಜನರ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಈರುಳ್ಳಿ ಬಹು ಪ್ರಮುಖವಾಗಿದೆ. ಆದರೆ ಈಗ ಈರುಳ್ಳಿಯ ಬೆಲೆಯು ಸಾಮಾನ್ಯರ ಕೈಗೆಟುಕದಂತೆ ಏರುತ್ತಿದೆ. ದಿನ ಕಳೆದಂತೆ ಈರುಳ್ಳಿ ಬೆಲೆಯು ಹತ್ತತ್ತು ರೂಪಾಯಿ ಏರಿಕೆಯಾಗುತ್ತಿದೆ.

ಅಕ್ಟೋಬರ್ 20 ರ ಮಂಗಳವಾರ, ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಸಗಟು ದರಕ್ಕೆ ಕೆ.ಜಿ.ಗೆ 81 ರೂ. ಇದ್ದರೆ, ಚಿಲ್ಲರೆ ವ್ಯಾಪಾರಿಗಳು ಇದನ್ನು ಕೆಜಿಗೆ 90 ರೂ. ಗೆ ಮಾರಾಟ ಮಾಡಿದ್ದಾರೆ. ಈ ಬೆಲೆಯನ್ನು ಭಾನುವಾರದ ಈರುಳ್ಳಿಯ ಬೆಲೆಗೆ ಹೋಲಿಸಿದರೆ ಏಕಾಏಕಿ 20 ರೂ.ಗೆ ಏರಿಕೆ ಕಂಡಿದೆ.
ಇಲ್ಲಿನ ಮಾರುಕಟ್ಟೆಗಳಿಗೆ ಈರುಳ್ಳಿಯನ್ನು ಹುಬ್ಬಳ್ಳಿ, ಬೆಳಗಾವಿ ಮತ್ತು ಕೆಲವು ಮಹಾರಾಷ್ಟ್ರ ನಗರಗಳಿಂದ ಸರಬರಾಜು ಮಾಡಲಾಗುತ್ತದೆ. ಆದರೆ ಮಹಾರಾಷ್ಟ್ರದಲ್ಲಿ ಭಾರಿ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಬೆಳೆಗಳು ಸಾಕಷ್ಟು ಹಾನಿಗೀಡಾಗಿವೆ. ಕೆಲವೆಡೆ ಸಂಪೂರ್ಣವಾಗಿ ನಾಶವಾಗಿದೆ. ಪ್ರಸ್ತುತ ಮಾರುಕಟ್ಟೆಗೆ ಈರುಳ್ಳಿಯು ಕಡಿಮೆ ಪೂರೈಕೆಯಾಗುತ್ತಿದ್ದು ಬೆಲೆಗಳು ದಾಖಲೆಯ ಹೆಚ್ಚಳವನ್ನು ಕಂಡಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಪ್ರಸ್ತುತ, ಹಳೆಯ ಈರುಳ್ಳಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾಗುತ್ತಿದ್ದು, ಪ್ರಸ್ತುತ ಬೆಳೆಯು ನಾಶವಾಗಿದೆ. ಡಿಸೆಂಬರ್ ವೇಳೆಗೆ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ತಾಜಾ ಈರುಳ್ಳಿ ದೊರೆಯಲಿದೆ. ಆವರೆಗೂ ಈರುಳ್ಳಿ ಬೆಲೆಯು ಏರುಗತಿಯಲ್ಲಿ ಸಾಗಾಲಿದೆ ಎಂದು ಹೇಳಲಾಗಿದೆ.
ಆದರೆ ಈರುಳ್ಳಿ ಸ್ಟಾಕ್ ಕಡಿಮೆ ಇರುವ ಈ ಸಂದರ್ಭದಲ್ಲಿ ಬೇರೆಡೆಯಿಂದ ಈರುಳ್ಳಿ ಸರಬರಾಜು ಮಾಡಿದರೆ ಬೆಲೆ ಇಳಿಯುವ ಭರವಸೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಕಳೆದ ಬಾರಿ ಈರುಳ್ಳಿಯ ಬೆಲೆ ಏರಿದಾಗ, ಕೆಲವು ಹೋಟೆಲ್ಗಳು ಈರುಳ್ಳಿಯ ಬದಲಾಗಿ ಎಲೆಕೋಸನ್ನು ಹೇರಳವಾಗಿ ಬಳಕೆ ಮಾಡಿದ್ದರು ಎಂಬುದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.
ಏತನ್ಮಧ್ಯೆ, ಆಲೂಗೆಡ್ಡೆ ಬೆಲೆಗಳು ಕೂಡಾ ಏರಿಕೆಯಾಗಿದೆ. ಮಂಗಳವಾರ ಆಲೂಗಡ್ಡೆಗೆ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 40 ರೂ. ಮತ್ತು ಚಿಲ್ಲರೆ ವ್ಯಾಪಾರದಲ್ಲಿ 50 ರೂ. ಬೆಲೆಯಿದೆ. ಆಲೂಗಡ್ಡೆ ಪೂರೈಸುವ ಬೆಳಗಾವಿ, ಚಿಕ್ಕಮಗಳೂರು ಮತ್ತು ಮಹಾರಾಷ್ಟ್ರಗಳಲ್ಲಿ ಭಾರಿ ಮಳೆಯಿಂದಾಗಿ ಪೂರೈಕೆಯ ಕೊರತೆ ಉಂಟಾಗಿದ್ದು ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗಿದೆ.