ಮಂಗಳೂರು, ಅ.25 (DaijiworldNews/PY): ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಕಳಕಟ್ಟೆ ಬಳಿ ಬಸ್ಸಿಗೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಘಟನೆ ನಡೆದ ಗಂಟೆಯೊಳಗೆ ಪತ್ತೆ ಹಚ್ಚಿರುವ ಪೊಲೀಸರು ಓರ್ವ ಆರೋಪಿ, ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಪರಾರಿಯಾಗಲು ಯತ್ನಿಸಿದ ಆರೋಪಿಗೆ ಸಹಕರಿಸಿದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಆರೋಪಿ ಅಲ್ಫಾಝ್ ಕಲ್ಪಾದೆ ಪೊಲೀಸರ ವಶದಲ್ಲಿದ್ದು, ಇನ್ನೊರ್ವ ಆರೋಪಿ ಪೊಂಗ ಅಶ್ರಫ್ ಪರಾರಿಯಾಗಿದ್ದಾನೆ.
ಘಟನೆಯ ವಿವರ: ಮಂಗಳೂರಿನಿಂದ ವಿಟ್ಲ ಕಡೆ ಸಂಚರಿಸುತ್ತಿದ್ದ ಖಾಸಗಿ ಬಸ್ಗೆ ಸೈಡ್ ಕೊಡುವ ವಿಚಾರದಲ್ಲಿ ನಿತ್ಯಾನಂದ ನಗರದಿಂದ ದೇರಳಕಟ್ಟೆವರೆಗೆ ಬೈಕ್ ಸವಾರರಿಗೆ ಮತ್ತು ಬಸ್ ಚಾಲಕನ ಮದ್ಯೆ ಮಾತಿನ ಚಕಮಕಿ ನಡೆದಿತ್ತು.
ದೇರಳಕಟ್ಟೆ ಬಳಿ ಬೈಕ್ನಲ್ಲಿ ಬಂದಿದ್ದ ಇಬ್ಬರು ಅತಿರೇಕಕ್ಕಿಳಿದು ಕಲ್ಲು ಎಸೆದು ಪರಾರಿಯಾಗಿದ್ದರು. ಕಲ್ಲುಬಸ್ಸಿನೊಳಗೆ ಬಿದ್ದಿದ್ದು ಗಾಜು ಪುಡಿಯಾಗಿದ್ದು ಬಸ್ನಲ್ಲಿ ಪ್ರಯಾಣಿಕರು ತುಂಬಿದ್ದು, ಬಸ್ ಚಾಲಕನಿಗೆ ಯಾವುದೇ ತೊಂದರೆಯಾಗದೆ ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ.
ಘಟನೆ ಬಳಿಕ ಪೊಲೀಸರು ಸ್ಥಳೀಯ ಸಿಸಿಟಿವಿ ಮೂಲಕ ಘಟನೆಯ ದೃಶ್ಯಾವಳಿ ವೀಕ್ಷಿಸಿದ್ದು, ಪೊಲೀಸರು ಬೈಕ್ ಹೋದ ದಿಕ್ಕಿಗೆ ತೆರಳಿ ವಾಪಾಸ್ ದೇರಳಕಟ್ಟೆ ಬಂದಾಗ ಸಿಸಿಟಿವಿಯಲ್ಲಿ ದಾಖಲಾಗಿದ್ದ ಬೈಕ್ ಸ್ಥಳೀಯವಾಗಿ ಸುತ್ತಾಡುತ್ತಿದ್ದುದು ಕಂಡುಬಂದಿದೆ. ಈ ವೇಳೆ ಕಂಡು ಹಿಡಿಯಲೆತ್ನಿಸಿದಾಗ ಬೈಕ್ನಲ್ಲಿದ್ದ ಅಶ್ರಫ್ ಪೊಲೀಸರ ಕೈಯಿಂದ ಓಡಲು ಯತ್ನಿಸಿದ್ದಾನೆ. ಈ ಸಂದರ್ಭ ಸ್ಥಳೀಯ ಗುಂಪೊಂದು, ಅಶ್ರಫ್ ತಪ್ಪಿಸಲು ಸಹಕರಿಸಿದರೆನ್ನಲಾಗಿದೆ. ಆಶ್ರಫ್ ಅನ್ನು ಬಂಧಿಸಲು ತಡಯಲು ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.