ಉಳ್ಳಾಲ, ಅ. 27 (DaijiworldNews/SM): ಇಲ್ಲಿನ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ನಡೆದ ಅಪಘಾತವೊಂದರಲ್ಲಿ ನವ ದಂಪತಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತಕ್ಕೆ ಅವೈಜ್ಞಾನಿಕ ತಿರುವು, ಕಾಮಗಾರಿಯೇ ಕಾರಣ ಎಂಬುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಅವೈಜ್ಞಾನಿಕ ತಿರುವು ಸಾರ್ವಜನಿಕರ ಆಕ್ರೋಶ:
ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ನಿತ್ಯ ಅಪಘಾತಗಳು ನಡೆಯುತ್ತಲೇ ಇದೆ. ಫ್ಲೈಓವರ್ ಕೊನೆಗಳ್ಳುವ ತೊಕ್ಕೊಟ್ಟು ಓವರ್ ಬ್ರಿಡ್ಜ್ ಸ್ಥಳದಲ್ಲಿಯೇ ಉಳ್ಳಾಲಕ್ಕೆ ಹೋಗುವ ದಾರಿ ಇರುವುದರಿಂದ ಅಪಘಾತವನ್ನು ಆಹ್ವಾನಿಸುತ್ತಲೇ ಇದೆ. ವಾರದ ಹಿಂದೆ ಬಸ್ ಮತ್ತು ಲಾರಿ ನಡುವೆ ಅಪಘಾತ ನಡೆದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೆ ವಾರ ಕಳೆಯುವುದರ ಒಳಗೆ ಮತ್ತೊಂದು ಭೀಕರ ಅಪಘಾತ ನಡೆದಿದ್ದು, ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದು ಬಳಿಕ ಬೈಕ್ ಮೇಲೆ ಸಂಚರಿಸಿದ ಪರಿಣಾಮ ನವದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸ್ಥಳದಲ್ಲಿ ಆಕ್ರೋಶಿತರು ಜಮಾಯಿಸಿದ್ದು, ಸಂಚಾರಿ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಓವರ್ ಬ್ರಿಡ್ಜ್ ಕೊನೆಗೊಳ್ಳುವ ಮೂಲೆಯಲ್ಲಿ ನಿಂತು ದಂಡ ವಿಧಿಸುವ ಪೊಲೀಸರು, ಫ್ಲೈಓವರ್ ನಲ್ಲಿ ನಿಂತು ವಾಹನಗಳ ವೇಗವನ್ನು ತಡೆಯುವಲ್ಲಿ ಪ್ರಯತ್ನಿಸುತ್ತಿಲ್ಲ ಅನ್ನುವ ಆರೋಪ ಸಾರ್ವಜನಿಕರು ಮಾಡಿದ್ದಾರೆ. ಈ ಬಗ್ಗೆ ಆಡಳಿತದಲ್ಲಿರುವವರಿಗೂ ಯಾವುದೇ ಚಿಂತೆ ಇಲ್ಲ ಎನ್ನುವಂತಾಗಿದ್ದು, ಹೆದ್ದಾರಿ ತಿರುವು ಸರಿ ಪಡಿಸಲು ಇನ್ನೆಷ್ಟು ಬಲಿ ಬೇಕು ಎಂಬುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿರ್ಲಕ್ಷ್ಯ ಬೇಡ-ಸೂಕ್ತ ಕ್ರಮ ಬೇಕು:
ಇನ್ನು ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊನೆಗೊಳ್ಳುವಲ್ಲಿಂದಲೇ ಉಳ್ಳಾಲಕ್ಕೆ ತೆರಳುವ ರಸ್ತೆಯ ತಿರುವು ಇದೆ. ಆದರೆ, ಇಲ್ಲಿ ಯಾವುದೇ ಸುರಕ್ಷಿತ ಕ್ರಮಗಳಿಲ್ಲ. ಮಂಗಳೂರಿನಿಂದ ತಲಪಾಡಿ ಕಡೆಗೆ ತೆರಳುವವರು ಫ್ಲೈ ಓವರ್ ಮೇಲಿನಿಂದ ವೇಗವಾಗಿ ಸಂಚರಿಸುತ್ತಾರೆ. ಅದೇ ರೀತಿಯಾಗಿ ಮಂಗಳೂರಿಗೆ ಬರುವವರೂ ಕೂಡ ವೇಗವಾಗಿಯೇ ಆಗಮಿಸುತ್ತಾರೆ. ಇಲ್ಲೇ ಮಂಗಳೂರಿನಿಂದ ಉಳ್ಳಾಲದತ್ತ ತೆರಳುವವರು ತಿರುವನ್ನು ಪಡೆದು ತೆರಳಬೇಕು. ಆದರೆ, ಇಲ್ಲಿ ಸಿಗ್ನಲ್ ಇಲ್ಲ. ಯಾವುದೇ ಎಚ್ಚರಿಕಾ ಕ್ರಮಗಳಿಲ್ಲ. ಇದರಿಂದಾಗಿ ಮತ್ತೆ ಮತ್ತೆ ಅಪಘಾತಗಳು ಸಂಭವಿಸುತ್ತಲೇ ಇವೆ. ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದ್ದರೂ ಸಂಬಂಧಿಸಿದ ಜನ ನಾಯಕರು ಮಾತ್ರ ತುಟಿ ಪಿಟಿಕ್ ಅನ್ನುತ್ತಿಲ್ಲ. ಇದೇ ರಸ್ತೆಯನ್ನು ಬಳಸಿಕೊಂಡು ಕ್ಷೇತ್ರದ ಶಾಸಕರು ಕೂಡ ಸಂಚಾರ ನಡೆಸುತ್ತಿದ್ದಾರೆ. ಆದರೆ, ಅವೈಜ್ಞಾನಿಕ ತಿರುವಿನ ಬಗ್ಗೆ ಯಾವೊಬ್ಬರೂ ಕೂಡ ಮಾತನಾಡುತ್ತಿಲ್ಲ. ಇದುವೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾಯನ್-ಪ್ರೀಯಾ ನವ ದಂಪತಿ ದಾರುಣ ಮೃತ್ಯು:
ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವದಂಪತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ಇಂದು ಸಂಜೆ ಸಂಭವಿಸಿದೆ. ಬಜಾಲ್ ನಿವಾಸಿ ರಯಾನ್ ಫೆರ್ನಾಂಡಿಸ್(26) ಮತ್ತು ಪ್ರಿಯಾ ಫೆರ್ನಾಂಡಿಸ್(26) ಮೃತರು. ಕಂಕನಾಡಿ ಫಾದರ್ ಮುಲ್ಲಸ್೯ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿರುವ ಇಬ್ಬರು ಕರ್ತವ್ಯ ಮುಗಿಸಿ ಉಳ್ಳಾಲ ಬಂಗೇರಲೇನ್ ನಲ್ಲಿರುವ ಬಾಡಿಗೆ ಮನೆಗೆ ತೆರಳುವ ಸಂದರ್ಭ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಅಪಘಾತ ಸಂಭವಿಸಿದೆ. ದಂಪತಿ ಇದ್ದ ಬೈಕ್ ಉಳ್ಳಾಲ ಕಡೆಗೆ ತಿರುಗುವ ಸಂದರ್ಭ ಅತಿ ವೇಗವಾಗಿ ತೊಕ್ಕೊಟ್ಟು ಫ್ಲೈಓವರ್ ಮೂಲಕ ಬಂದ ಲಾರಿ ಢಿಕ್ಕಿ ಹೊಡೆದು, ಇಬ್ಬರ ಮೇಲೂ ಚಲಿಸಿ ಕೆಲ ಮೀ. ದೂರಕ್ಕೆ ಎಳೆದುಕೊಂಡು ಹೋಗಿ ನಿಂತಿದೆ. ಘಟನೆಯಿಂದ ಪ್ರಿಯಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ರಯಾನ್ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ.