ಮಂಗಳೂರು, ನ.02 (DaijiworldNews/PY): "ಮುಸ್ಲಿಂ ಪ್ರಾಬಲ್ಯದ ಉಳ್ಳಾಲ ಕ್ಷೇತ್ರವು ಪಾಕಿಸ್ತಾನವಾಗಿ ಮಾರ್ಪಟ್ಟಿದೆ" ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೋಮವಾರ ಹೇಳಿದ್ದಾರೆ.

ಕಿನ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ನಮ್ಮ ದೇವಸ್ಥಾನ, ಸಂಸ್ಕೃತಿ, ಸಂಪ್ರದಾಯವನ್ನು ಉಳಿಸುವವರು ಯಾರು?. ಹಿಂದೂಗಳು ಎಚ್ಚರಗೊಳ್ಳಬೇಕು" ಎಂದರು.
"ಮುಸ್ಲಿಂ ಜನಸಂಖ್ಯೆ ಹೆಚ್ಚಾಗಲು ಆರಂಭವಾದಾಗ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದವು. ಅದೇ ರೀತಿ ಉಳ್ಳಾಲ ಹಾಗೂ ಅನೇಕ ಕಡೆಗಳು ಪಾಕಿಸ್ತಾನದಂತೆ ಮಾರ್ಪಟ್ಟಿವೆ" ಎಂದು ಹೇಳಿದರು.
"ಮನೆಯಲ್ಲಿ ಒಂದೇ ಮಗು ಇದ್ದರೆ, ಮಗುವಿಗೆ ಯಾವುದೇ ಸಹೋದರಿ ಅಥವಾ ಸಹೋದರರಿಲ್ಲದಿದ್ದರೆ ಮಗು ಸ್ವಾರ್ಥಿಯಾಗುತ್ತದೆ. ಕುಟುಂಬದಲ್ಲಿ ಮಕ್ಕಳು ಹೆಚ್ಚಿದ್ದಷ್ಟು ಖುಷಿ ಹೆಚ್ಚು. ಕಿನ್ಯಾ ಹಾಗೂ ಉಳ್ಳಾಲ ಮುಂತಾದ ಸ್ಥಳಗಳಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆ ಎಂದು ನಾನು ಭಾವಿಸುತ್ತೇನೆ. ಇಂತಹ ಸನ್ನಿವೇಶದಲ್ಲಿ ನಮ್ಮ ದೇವಾಲಯ, ಆಚರಣೆಗಳು ಹಾಗೂ ಸಂಸ್ಕೃತಿಯನ್ನು ರಕ್ಷಿಸುವವರು ಯಾರು?" ಎಂದು ಪ್ರಶ್ನಿಸಿದರು.
"ಪಾಕಿಸ್ತಾನ ಹೇಗೆ ಅಸ್ತಿತ್ವಕ್ಕೆ ಬಂತು? ಅದಕ್ಕೆ ಕಾರಣ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದ್ದು. ಹಾಗಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದವು. ಈಗ ನೀವು ಉಳ್ಳಾಲಕ್ಕೆ ಹೋದರೆ ಅದು ಪಾಕಿಸ್ತಾನದಂತೆ ಆಗಿದೆ. ಅದು ಬೇರೆ ಆಗಲು ಸಾಧ್ಯವೇ?" ಎಂದು ಕೇಳಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಅವರ ಈ ಹೇಳಿಕೆಯು ಕರಾವಳಿ ಪ್ರದೇಶದಲ್ಲಿ ರಾಜಕೀಯ ಬಿರುಗಾಳಿ ಸೃಷ್ಟಿಸುವ ಸಾಧ್ಯತೆ ಇದೆ. ಈ ಹೇಳಿಕೆಯು ಈಗಾಗಲೇ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲೂ ಪ್ರಸಾರ ಮಾಡಲಾಗುತ್ತಿದ್ದು, ಪ್ರತಿಪಕ್ಷಗಳು ಭಟ್ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸುವ ಅಥವಾ ದೂರು ದಾಖಲಿಸಬಹುದು ಎನ್ನಲಾಗಿದೆ.