ಉಪ್ಪುಂದ, ನ.02 (DaijiworldNews/PY): "ವಂಡ್ಸೆ ಪಂಚಾಯತ್ನ ಮಹತ್ವಾಕಾಂಕ್ಷಿ ಯೋಜನೆಯಾದ ಎಸ್ಎಲ್ಆರ್ಎಂ ಘಟಕದ ಅಧೀನ ಸಂಸ್ಥೆ ಸ್ವಾವಲಂಬನಾ ಮಹಿಳಾ ಹೊಲಿಗೆ ತರಬೇತಿ ಕೇಂದ್ರವನ್ನು ರಾಜಕೀಯ ದ್ವೇಶದಿಂದ ಸ್ಥಳಾಂತರ ಮಾಡಿರುವುದು ಸರಿಯಾದ ನಡೆಯಲ್ಲ. ಅಧಿಕಾರವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡ ಬೈಂದೂರಿನ ಶಾಸಕರು ಆತ್ಮನಿರ್ಭರತೆಯ ಕನಸು ಕಂಡು ಸ್ವಾವಲಂಬಿಯಾಗಿ ಬದುಕುತ್ತಿದ್ದ ಮಹಿಳೆಯರನ್ನು ಬೀದಿಗೆ ತಳ್ಳಿದ್ದಾರೆ" ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ. ಗೋಪಾಲ ಪೂಜಾರಿ ಆರೋಪಿಸಿದರು.









ಅವರು ಸೋಮವಾರ ವಂಡ್ಸೆಯ ಸ್ವಾವಲಂಬನಾ ಹೊಲಿಗೆ ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ಮುಚ್ಚಿರುವುದನ್ನು ಖಂಡಿಸಿ ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಆಶ್ರಯದಲ್ಲಿ ಉಪ್ಪುಂದ ಪೇಟೆಯಲ್ಲಿ ನಡೆದ ಸರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದರು.
"ವಂಡ್ಸೆ ಪಂಚಾಯತ್ನ ಆಡಳಿತ ನೋಡಿ ಅಲ್ಲಿನ ಅಧ್ಯಕ್ಷರನ್ನು ಹಾಡಿ ಹೊಗಳುತ್ತಿದ್ದ ಶಾಸಕರು ಇದೀಗ ಏಕಾಏಕಿಯಾಗಿ ಪಂಚಾಯತ್ ಆಡಳಿತದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ವಂಡ್ಸೆ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟರು ಬಿಜೆಪಿಗೆ ಹೋಗಲು ನಿರಾಕರಿಸಿದ ಬಳಿಕ ಶಾಸಕರು ಈ ರೀತಿಯಾಗಿ ಅವರ ಮೇಲೆ ದಾಳಿ ಮಾಡಲು ಆರಂಭಿಸಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಎಪ್ಪತ್ತು ಮಂದಿ ಮಹಿಳೆಯರನ್ನು ಬೀದಿಗೆ ತಳ್ಳಿರುವ ಶಾಸಕರ ವಿರುದ್ದ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ" ಎಂದರು.
"ಕಾನೂನು ಉಲ್ಲಂಘನೆ ಮಾಡಿ ರಾತ್ರೋರಾತ್ರಿ ಪೊಲೀಸ್ ರಕ್ಷಣೆಯಲ್ಲಿ ಹೊಲಿಗೆ ತರಬೇತಿ ಕೇಂದ್ರದ ಬೀಗ ಒಡೆದು ಮಹಿಳೆಯರ ಹೊಲಿಗೆ ಯಂತ್ರಗಳನ್ನು ಪಾಳುಬಿದ್ದ ಕಟಕ್ಟಡಕ್ಕೆ ಸ್ಥಳಾಂತರ ಮಾಡಿದ್ದಾರೆ. ಶಾಸಕರ ಕುಮ್ಮಕ್ಕಿನ ಮೂಲಕ ಕಾನೂನುಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ಮಾಡಿರುವ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕು ಎಂದ ಅವರು, ಸರಣಿ ಸತ್ಯಾಗ್ರಹ ನಡೆಸುತ್ತಿರುವ ಸಂಘಟನೆಯನ್ನು ಕರೆದು ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಬಗೆಹರಿಸಬೇಕಿದ್ದ ಶಾಸಕರು ತಮಗೇನು ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿರುವುದು ದುರಂತ" ಎಂದರು.
ಯುವ ಕಾಂಗ್ರೆಸ್ ಮುಖಂಡ ವಿಕಾಸ್ ಹೆಗ್ಡೆ ಮಾತನಾಡಿ, "ಸುಕುಮಾರ್ ಶೆಟ್ಟಿ ಅವರ ಸರ್ವಾಧಿಕಾರಿ ಆಡಳಿತಕ್ಕೆ ಬೈಂದೂರು ಕ್ಷೇತ್ರದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಸತ್ತುಹೋಗಿದೆ. ಕೇವಲ ಐದು ಜನ ಮಹಿಳೆಯರು ಖಾಸಗಿಯಾಗಿ ಹೊಲಿಗೆ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದಾರೆ ಎಂದು ಶಾಸಕರು ಬೇಜವಾಬ್ದಾರಿ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಸುಕುಮಾರ್ ಶೆಟ್ಟರಿಗೆ ಸಾಮಾನ್ಯ ಜ್ಞಾನವೂ ಇಲ್ಲ. ಎಸ್ಎಲ್ಆರ್ಎಂ ಘಟಕ ಎನ್ನುವುದು ಒಂದು ಸರಕಾರಿ ಸಂಸ್ಥೆ. ಈ ಯೋಜನೆಯ ಒಂದು ಭಾಗವಾಗಿ ಸ್ವಾವಲಂಬನಾ ಮಹಿಳಾ ಹೊಲಿಗೆ ತರಬೇತಿ ಕೇಂದ್ರ ನಡೆಯುತ್ತಿದೆ ಬಿಟ್ಟರೆ ಇದು ಖಾಸಗಿ ಸಂಸ್ಥೆಯಲ್ಲ. ಐದು ಜನ ಮಹಿಳೆಯರಿರಬಹುದು ಅಥವಾ ಐನೂರು ಜನ ಮಹಿಳೆಯರಿರಬಹುದು. ಅವರಿಗೆ ಅವರದೆ ಆದ ಹಕ್ಕು-ಕರ್ತವ್ಯಗಳಿವೆ. ಆ ಹಕ್ಕನ್ನು ಶಾಸಕರು ಕಸಿದುಕೊಳ್ಳಲು ಹೊರಟಿದ್ದಾರೆ. ತಮ್ಮ ಅಧಿಕಾರ ದಾಹದ ಮೂಲಕ ಮಹಿಳೆಯರನ್ನು ಬೀದಿಪಾಲು ಮಾಡಿರುವ ಸುಕುಮಾರ್ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಎದುರಿಸುತ್ತಾರೆ" ಎಂದರು.
ಕಾಂಗ್ರೆಸ್ ಮುಖಂಡರಾದ ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ಸಂತೋಷ್ ಶೆಟ್ಟಿ ಬಲಾಡಿ, ಮದನ್ ಕುಮಾರ್ ಮತ್ತಿತರರು ಮಾತನಾಡಿದರು.
ಕಾಂಗ್ರೆಸ್ ನಾಯಕ ರಾಜು ಪೂಜಾರಿ, ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ತಾ.ಪಂ. ಸದಸ್ಯರಾದ ಜಗದೀಶ್ ದೇವಾಡಿಗ, ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ, ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.