ಮಂಗಳೂರು, ನ.09 (DaijiworldNews/PY): ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ, ರೈತ ವಿರೋಧಿ ಮತ್ತು ಜನವಿರೋಧಿ ನೀತಿಗಳ ವಿರುದ್ಧ 2020 ನವೆಂಬರ್ 26ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಲಿದ್ದು, ಬಿಸಿಯೂಟ ನೌಕರರು ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದರು.




ನ.9ರಂದು ರಾಜ್ಯವ್ಯಾಪಿ ನಡೆದ ಪ್ರತಿಭಟನೆ ಭಾಗವಾಗಿ ಮಂಗಳೂರಿನ ಮಿನಿ ವಿಧಾನ ಸೌಧದ ಮುಂದುಗಡೆ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಪ್ರತಿಭಟನಾ ಪ್ರದರ್ಶನಗಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯುನ ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ ಅವರು, "ಬಿಸಿಯೂಟ ನೌಕರರಿಗೆ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ದುಡಿದಿರುವ ದಿನಗಳ ವೇತನ ಪಡೆಯಬೇಕಾದರೂ ಹೋರಾಟ ಮಾಡಬೇಕಾದ ಸ್ಥಿತಿ ಇದೆ. ವೇತನ ಏರಿಕೆ ಆಗಬೇಕು, ಸಾಮಾಜಿಕ ಭದ್ರತೆ ಒದಗಿಸಬೇಕು. ಸ್ಕೀಂ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣೆಸಬೇಕು ಎಂದು ಹಲವಾರು ಹಂತದ ಹೋರಾಟ ನಡೆಸಿದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಬದಲಾಗಿ ಎಲ್ಲಾ ರಂಗಗಳನ್ನು ಖಾಸಗೀಕರಿಸಲಾಗುತ್ತಿದೆ. ನಿರುದ್ಯೋಗ ಸಮಸ್ಯೆ ಗಗನಕ್ಕೆ ಮುಟ್ಟಿದೆ. ವಿದ್ಯುತ್ ದರಿ ಏರಿಕೆ, ಪ್ರಯಾಣದರ, ಅಡುಗೆ ಅನಿಲ ದರ, ಅಗತ್ಯ ವಸ್ತುಗಳ ದರ ಏರಿಸಲಾಗಿದೆ. ಕಾರ್ಮಿಕ ಕಾನೂನು, ರೈತರ ಕಾನೂನಗಳನ್ನು ಕಾರ್ಪೋರೇಟ್ ಸಂಸ್ಥೆಗಳ ಪರ ತಿದ್ದುಪಡಿ ಮಾಡಲಾಗುತ್ತಿದೆ. ದೇಶ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ದೇಶದ ಕಾರ್ಮಿಕ ಸಂಘಟನೆಗಳು ನವೆಂಬರ್ 26ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು, ಎಲ್ಲಾ ವಿಭಾಗದ ಜನತೆ ಯಶಸ್ವಿಗೊಳಿಸಬೇಕು" ಎಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಜೆಎಸ್ಎಸ್ನ ಮುಂದಾಳು ಭಾರತಿ ಬೋಳಾರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಗಿರಿಜ ಸ್ವಾಗತಿಸಿ, ಕೊನೆಯಲ್ಲಿ ಭವ್ಯ ಧನ್ಯವಾದ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ, ತಾಲೂಕು ಆಹಾರ ಅಧಿಕಾರಿಗಳಿಗೆ ,ಡಿಡಿಪಿಐಯವರಿಗೆ ಮನವಿ ನೀಡಲಾಯಿತು. ಪ್ರದರ್ಶನದ ನೇತೃತ್ವವನ್ನು ರೇಖಲತಾ, ರತ್ನಮಾಲಾ, ಆಶಾ, ಶೋಭಾ, ಲಲಿತಾ, ಅರುಣ, ಉಮಾವತಿ, ಯಶೋಧಾ, ಚಂಚಲಾಕ್ಷಿ, ವಿಶಾಲಾಕ್ಷಿ ಮುಂತಾದವರು ವಹಿಸಿದ್ದರು.