ಉಡುಪಿ, ನ. 13 (DaijiworldNews/SM): ರಾಷ್ಟ್ರೀಯ ಹೆದ್ದಾರಿ 169ರ ಆಗುಂಬೆ ಘಾಟ್ ನಲ್ಲಿ ಮಳೆ ಇಲ್ಲದ ದಿನಗಳಲ್ಲಿ ಘನ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ನೀಡಲಾಗಿದೆ.

ತೀರ್ಥಹಳ್ಳಿ-ಉಡುಪಿ-ಮಂಗಳೂರು ರಸ್ತೆಯ ಆಗುಂಬೆ ಘಾಟಿಯ ಮಾರ್ಗದಲ್ಲಿ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಭಾರಿ ಹಾಗೂ ಸತತ ಮಳೆಯಾಗುವ ದಿನಗಳಂದು ಘನ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. 12 ಟನ್ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು.
ಪರ್ಯಾಯವಾಗಿ ಉಡುಪಿ-ಬ್ರಹ್ಮಾವರ-ಬಾರ್ಕೂರು-ಶಂಕರನಾರಾಯಣ-ಸಿದ್ಧಾಪುರ-ಹೊಸಗಂಡಿ-ಹುಲಿಕಲ್ ಘಾಟಿ-ಹೊಸನಗರ-ತೀರ್ಥಹಳ್ಳಿ ಹಾಗೂ ಉಡುಪಿ-ಕಾರ್ಕಳ-ಬಜಗೋಳಿ-ಎಸ್.ಕೆ. ಬಾರ್ಡರ್-ಕೆರೆಕಟ್ಟೆ-ಶೃಂಗೇರಿ-ಶಿವಮೊಗ್ಗ ಮೂಲಕ ಸಂಚರಿಸುವಂತೆ ಹಾಗೂ ಭಾರಿ ಮಳೆ ಇಲ್ಲದಿರುವ ದಿನಗಳಲ್ಲಿ ಎಲ್ಲಾ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.