ಮಂಗಳೂರು, ನ.21 (DaijiworldNews/HR): ಕೊರೊನಾ ಸಂಬಂಧ ಆಸ್ಪತ್ರೆಯಲ್ಲಿ ಹಣ ಕೊಡುತ್ತಿರುವುದಾಗಿ ಮಹಿಳೆಯೋರ್ವರನ್ನು ನಂಬಿಸಿ ಯುವಕನೋರ್ವ 60,000 ರೂ ಮೌಲ್ಯದ ಕರಿಮಣಿ ಸರ ಮತ್ತು 20,000 ರೂ. ನಗದು ಪಡೆದು ವಂಚಿಸಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.

30 ರಿಂದ 35 ವಯಸ್ಸಿನ ಯುವಕ ರಾಕೇಶ್ ಎಂಬ ಹೆಸರಿನಲ್ಲಿ ವಂಚಿಸಿದ್ದಾನೆ.
ನ.20 ರಂದು ತೊಕ್ಕೊಟ್ಟು ಒಳಪೇಟೆಯ ನ್ಯಾಯಬೆಲೆ ಅಂಗಡಿ ಸಮೀಪ ನಿಂತಿದ್ದ ಮಹಿಳೆಯನ್ನು ತನ್ನನ್ನು ಬ್ಯಾಂಕ್ ಸಿಬ್ಬಂದಿಯೆಂದು ರಾಕೇಶ್ ಪರಿಚಯ ಮಾಡಿಕೊಂಡಿದ್ದು, ಕೊರೊನಾ ಸಂಬಂಧ ಆಸ್ಪತ್ರೆಗಳಲ್ಲಿ ರೂ. 2 ಲಕ್ಷ ಹಣ ನೀಡಲಾಗುತ್ತಿದ್ದು, ಅದನ್ನು ವಾಪಸ್ಸು ಕಟ್ಟಲು ಇರುವುದಿಲ್ಲ. ಈ ದಿನವೇ ಹಣ ಸಿಗುತ್ತದೆ ಎಂದು ನಂಬಿಸಿ ರಿಕ್ಷಾದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ವೈದ್ಯರಿಗೆ ನೀಡಲು ರೂ.20,000 ಹಾಗೂ ಹೆಚ್ಚುವರಿಯಾಗಿ ನೀಡಲು ಮಹಿಳೆ ಬಳಿ ಚಿನ್ನವನ್ನು ಕೇಳಿದ್ದ. ಅದರಂತೆ ಮಹಿಳೆಯು 4 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ನೀಡಿದ್ದಾರೆ. ಅದಕ್ಕೆ ಬದಲಾಗಿ ತನ್ನ ತಾಯಿಯ ಚಿನ್ನದ ಸರ ಇರುವುದಾಗಿ ಮಹಿಳೆಗೆ ನಕಲಿ ಚಿನ್ನವನ್ನು ನೀಡಿ ನಾಪತ್ತೆಯಾಗಿದ್ದಾನೆ. ಹಣದ ಆಸೆಯಿಂದ ತೆರಳಿದ್ದ ಮಹಿಳೆ ಮೋಸಕ್ಕೆ ಒಳಗಾಗಿ ನಗದು ರೂ. 20,000 ಹಾಗೂ ರೂ.60,000 ಬೆಲೆಬಾಳುವ ಚಿನ್ನದ ಕರಿಮಣಿ ಸರವನ್ನು ಕಳೆದುಕೊಂಡಿದ್ದಾರೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.