ಮಂಗಳೂರು, ನ.23 (DaijiworldNews/PY): "ಪ್ರತಿಯೊಂದಕ್ಕೂ ಬಂದ್ ಬಂದ್ ಎನ್ನುತ್ತೀರಲ್ಲ ಕರ್ನಾಟಕವೇನು ನಿಮ್ಮ ಅಪ್ಪನ ಮನೆಯ ಆಸ್ತಿನಾ?. ಬಂದ್ ಮಾಡಲು ಬಂದರೆ ಕಲ್ಲು ಹೊಡೆದು ಕಳುಹಿಸಿ" ಎಂದು ಕಾಳಿಕಾ ಮಠದ ಶ್ರೀರಿಷಿ ಕುಮಾರ ಸ್ವಾಮೀಜಿ ಹೇಳಿದ್ದಾರೆ.



ರಾಮ್ ಸೇನಾ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಡಿ.5ರ ಕನ್ನಡ ಸಂಘಟನೆ ಬಂದ್ ವಿಚಾರವಾಗಿ ಮಾತನಾಡಿದ ಅವರು, "ಬಂದ್ ಮಾಡಲು ಬಂದರೆ ಕಲ್ಲು ಹೊಡೆದು ಕಳುಹಿಸಿ. ಪ್ರತಿಯೊಂದಕ್ಕೂ ಬಂದ್ ಬಂದ್ ಎನ್ನುತ್ತೀರಲ್ಲ ಕರ್ನಾಟಕವೇನು ನಿಮ್ಮ ಅಪ್ಪನ ಮನೆಯ ಆಸ್ತಿನಾ?. ಕನ್ನಡದ ಹೆಸರು ಹೇಳಿ ಕಿಡಿಗೇಡಿತನ ನಡೆಸುತ್ತಿದ್ದಾರೆ. ಸಂಘಟನೆ ಹೆಸರು ಹೇಳಿ ಪುಡು ರೌಡಿಸಂ ಮಾಡುತ್ತಿದ್ದಾರೆ" ಎಂದು ಕನ್ನಡ ಸಂಘಟನೆ ವಿರುದ್ದ ಕಾಳಿಕಾ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಮರಾಠರಿಗೆ ಪ್ರಾಧಿಕಾರ ಕೊಟ್ಟರೆ ನಿಮಗೇನು?. ನೀವು 20 ಮಂದಿ ಸೇರಿದರೆ ಮಾತ್ರ ಕರ್ನಾಟಕನಾ?. 6.5 ಕೋಟಿ ಜನ ನಿಮ್ಮ ಮಾತು ಕೇಳಬೇಕಾ?. ವರ್ಷಕ್ಕೆ ಸುಮಾರು ಶೇ.20ರಷ್ಟು ಹಿಂದೂ ಸಂಘಟನೆಯ ಕಾರ್ಯಕರ್ತರು ಸಾಯುತ್ತಿದ್ದಾರೆ. ಕನ್ನಡ ಸಂಘಟನೆಯಲ್ಲಿ ಒಬ್ಬನಾದರೂ ಸತ್ತಿದ್ದೀರಾ?" ಎಂದು ಪ್ರಶ್ನಿಸಿದರು.
ವಾಟಾಳ್ ನಾಗಾರಾಜ್ ಅವರ ಹೆಸರು ಹೇಳದೇ ವಾಗ್ದಾಳಿ ನಡೆಸಿದ ಅವರು, "ಅವನ್ಯಾರೋ ನರಿ, ಕತ್ತೆ ತಗೊಂಡು ಬಂದು ಕೂಗಾಡ್ತಾನೆ. ಒದ್ದಾಡಿ, ಉರುಳಾಡಿ ಕೊನೆಗೆ ಮನೆಗೆ ಹೋಗುತ್ತಾನೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತಿದ್ದೇನೆ. ಇಂತವರನ್ನು ಯಾಕೆ ರಾಜ್ಯದ ಪ್ರಾಣ ತೆಗೆಯಲು ಇಟ್ಟುಕೊಂಡಿದ್ದೀರ?. ಇಂತವರನ್ನು ಸರಕಾರ ಶೂಟ್ ಮಾಡಿ ಬಿಸಾಕಲಿ. ಶಾಸ್ತ್ರ ಹಾಗೂ ಶಸ್ತ್ರ ಇವೆರಡೂ ನಮ್ಮ ಸಂಸ್ಕೃತಿ" ಎಂದು ಹೇಳಿದ್ದಾರೆ.