ಮಂಗಳೂರು, ನ.30 (DaijiworldNews/PY): "ಜನ ಸಾಮಾನ್ಯರು ಸಕಾಲ ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳುವುದನ್ನು ಚುರುಕುಗೊಳಿಸಲು ಸಕಾಲ ಸಪ್ತಾಹ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ" ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಅವರು ಇಂದು ಸಕಾಲ ಸಪ್ತಾಹ ಕಾರ್ಯಕ್ರಮವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದರು.
"ಪ್ರಾರಂಭದಲ್ಲಿ ಸಕಾಲ ಯೋಜನೆಯಡಿ 151 ಸೇವೆಗಳನ್ನು ವಿವಿಧ ಇಲಾಖೆಗಳ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುತ್ತಿದ್ದು, ಪ್ರಸ್ತುತ 98 ಇಲಾಖೆಗಳಲ್ಲಿ 1,025 ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸಲಾಗುತ್ತಿದೆ" ಎಂದರು.
"ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಸಕಾಲದ ಕಾರ್ಯಕ್ಕೆ ಸ್ವಲ್ಪ ಹಿನ್ನೆಡೆಯಾಗಿದ್ದು, ಮತ್ತೆ ಅದನ್ನು ಚುರುಕುಗೊಳಿಸುವ ಉದ್ದೇಶದಿಂದ ಸಪ್ತಾಹ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ" ಎಂದರು.
"ಜನಸಾಮಾನ್ಯರು ನಿಗದಿತ ಕಾಲಮಿತಿಯೊಳಗೆ ಸೇವೆಯನ್ನು ಪಡೆಯಬೇಕು ಎಂಬ ಉದ್ದೇಶದಿಂದ ಸಕಾಲ ಯೋಜನೆ ಜಾರಿಗೆ ತರಲಾಗಿದೆ. ಇಲ್ಲಿಯವರೆಗೆ 22,88,81,652 ಅರ್ಜಿಗಳು ಸಲ್ಲಿಸಿದ್ದು ಅವುಗಳಲ್ಲಿ 22,82,55,866 ಅರ್ಜಿಗಳು ಇತ್ಯರ್ಥ ಪಡಿಸಲಾಗಿದೆ" ಎಂದರು.
"ಇಲಾಖೆಗಳಲ್ಲಿ ಅರ್ಜಿಗಳನ್ನು ಸ್ವೀಕರಿಸುವಾಗ ಸಕಾಲದ ಅಡಿಯಲ್ಲಿ ಅರ್ಜಿಗಳನ್ನು ಪಡೆದು, ಅರ್ಜಿಗಳನ್ನು ನಿಗದಿತಕಾಲವಾದಿಗಳಲ್ಲಿ ವಿಲೇವಾರಿ ಮಾಡಬೇಕು. ಸಣ್ಣಪುಟ್ಟ ಕಾರಣಗಳನ್ನು ನೀಡಿ ಅರ್ಜಿ ತಿರಸ್ಕರಿಸುವುದನ್ನು ಮಾಡಬಾರದು. ಬಾಕಿ ಉಳಿದ ಅರ್ಜಿಗಳನ್ನು ಶೀಘ್ರದಲ್ಲಿಯೇ ವಿಲೇವಾರಿ ಮಾಡಬೇಕು" ಎಂದರು.
"ಪ್ರಸ್ತುತ ಮಾಹೆಯಲ್ಲಿ ಕೊರೊನಾ ಅರ್ಜಿಗಳ ವಿಲೇವಾರಿಯಲ್ಲಿ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನ, ಚಿಕ್ಕಮಂಗಳೂರು ದ್ವಿತೀಯ ಸ್ಥಾನ ಪಡೆದರೆ, ಚಿಕ್ಕಬಳ್ಳಾಪುರ ತೃತೀಯ ಸ್ಥಾನದಲ್ಲಿದೆ. ಕ್ರಮವಾಗಿ ರಾಯಚೂರು, ಬೆಂಗಳೂರು ಕೊನೆಯ ಸ್ಥಾನದಲ್ಲಿದೆ ಎಂದ ಅವರು ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅರ್ಜಿಗಳು ಬಂದಿವೆ" ಎಂದರು.
"ಪ್ರತಿಯೊಂದು ಇಲಾಖೆಯು ತಮ್ಮ ಕಚೇರಿಯಲ್ಲಿ ಸಕಾಲ ಸೇವೆಗಳ ಮಾಹಿತಿಯ ಬೋರ್ಡ್ ಅನ್ನು ಪ್ರದರ್ಶಿಸಬೇಕು. ಜನಸಾಮಾನ್ಯರಿಂದ ಸಕಾಲ ಸೇವೆಗಳ ಬಗ್ಗೆ ಅನಿಸಿಕೆಗಳನ್ನು ಪಡೆಯಬೇಕು" ಎಂದರು.
"ಸಕಾಲ ಯೋಜನೆಯ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಇಲಾಖೆಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಕೈಜೋಡಿಸಬೇಕು. ಸಕಾಲ ಯೋಜನೆಯ ಬಗ್ಗೆ ಇಲಾಖೆಗಳು ಕೈಗೊಳ್ಳುವ ಕಾರ್ಯಗಳ ಮೇಲುಸ್ತುವಾರಿ ತಪ್ಪದೆ ಮಾಡಬೇಕು" ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಮಾತನಾಡಿ, "ಸಕಾಲದ ಯೋಜನೆಯ ಬಗ್ಗೆ ಜನಜಾಗೃತಿ ಮೂಡಿಸಿ ಹೆಚ್ಚು ಜನರು ತಮ್ಮ ಸೇವೆಗಳನ್ನು ಪಡೆಯುವ ಹಾಗೆ ಅಧಿಕಾರಿಗಳು ಕಾರ್ಯ ಪ್ರವೃತರಾಗಬೇಕು" ಎಂದರು.
ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಸಕಾಲ ಯೋಜನೆಯ ಹೆಚ್ಚುವರಿ ಮಿಷನ್ ನಿರ್ದೇಶಕಿ ಡಾ. ಬಿ.ಆರ್ ಮಮತಾ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪ, ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ರಮ್ಯಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ ವರ್ಣೇಕರ್ ಮತ್ತಿತರರು ಉಪಸ್ಥಿತರಿದ್ದರು.