ಉಡುಪಿ, ಡಿ.01 (DaijiworldNews/MB) : ರೈತ ವಿರೋಧಿ ಕೃಷಿ ಮತ್ತು ಭೂ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಮೋದಿ ಸರ್ಕಾರದ ದಾಳಿಯನ್ನು ಖಂಡಿಸಿ ಹಾಗೂ ರೈತರ ಹೋರಾಟವನ್ನು ಬೆಂಬಲಿಸಿ ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ಸಿಐಟಿಯು, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ, ಅಖಿಲ ಭಾರತ ಕಿಸಾನ್ ಸಂಘದ ನೇತೃತ್ವದಲ್ಲಿ ಜಂಟಿಯಾಗಿ ಪ್ರತಿಭಟನೆ ನಡೆಸಿದರು.




ಸಭೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ''ದೇಶದ ದೊಡ್ಡ ಬಂಡವಾಳಗಾರರಿಗೆ ದೇಶದ ಜನರ ಸಂಪತ್ತನ್ನು ಮಾರಾಟ ಮಾಡುವುದು ಬಿಜೆಪಿ ಪಕ್ಷದ ದೇಶಭಕ್ತಿ ಎಂಬುವುದು ಸಾಬೀತಾಗಿದೆ. ಇಂತಹ ದೇಶಭಕ್ತಿಯು ರೈತರು, ಕಾರ್ಮಿಕರು, ಕೂಲಿಕಾರರಿಗೆ ಬಹುದೊಡ್ಡ ಅಪಾಯ ತರಲಿದೆ. ಬಿಜೆಪಿಯ ಬಂಡವಾಳಗಾರರ ಪರವಾದ ಇಂತಹ ರಾಷ್ಟ್ರೀಯವಾದ ಒಪ್ಪಲು ಸಾಧ್ಯವಿಲ್ಲ'' ಎಂದು ಹೇಳಿದರು.
''ಸಣ್ಣ ಕೈಗಾರಿಕೆಗಳು ನಾಶವಾಗುತ್ತಿದ್ದು ನಿರುದ್ಯೋಗ ಉಲ್ಬಣಗೊಂಡು ಜಿಡಿಪಿ ಕುಸಿಯುತ್ತಿದೆ. ಜನರ ಆದಾಯ ಸ್ಥಗಿತಗೊಂಡಿದೆ. ರೈತ ವಿರೋಧಿ, ಭೂಸುಧಾರಣಾ ತಿದ್ದುಪಡಿ ಕಾಯ್ದೆಗಳು ಜನರಿಗೆ ಮತ್ತಷ್ಟು ಸಂಕಷ್ಟ ತರಲಿದೆ. ಇಂತಹ ನೀತಿಗಳ ವಿರುದ್ದ ದಹಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಸರಕಾರ ಕೂಡಲೇ ಅವರ ಮೇಲೆ ದಾಖಲಿಸಿರುವ ಕೇಸುಗಳನ್ನು ವಾಪಾಸ್ಸು ಪಡೆಯಬೇಕು. ಕಾರ್ಪೋರೇಟ್ ಪರ ನೀತಿ ಕೂಡಲೇ ಹಿಂತೆಗೆದುಕೊಳ್ಳಬೇಕು'' ಎಂದು ಆಗ್ರಹಿಸಿದರು.
ಈ ಸಂದರ್ಭ ಪ್ರಧಾನ ಮಂತ್ರಿಯವರಿಗೆ ಜಿಲ್ಲಾಧಿಕಾರಿಯವರ ಮೂಲಕ ಮನವಿ ನೀಡಲಾಯಿತು. ಸಿಐಟಿಯು ಮುಖಂಡರಾದ ಕೆ.ಶಂಕರ್, ಎಚ್ ನರಸಿಂಹ, ಶಶಿಧರಗೊಲ್ಲ, ಮಹಾಬಲವಡೇರ ಹೋಬಳಿ, ಬಲ್ಕೀಸ್ ಮೊದಲಾದವರು ಉಪಸ್ಥಿತರಿದ್ದರು.