ಮಂಗಳೂರು, ಡಿ.03 (DaijiworldNews/MB) : ಮೀನುಗಾರಿಕಾ ದೋಣಿ ದುರಂತ ಪ್ರಕರಣದಲ್ಲಿ ಮೃತಪಟ್ಟ ಐವರ ಹಾಗೂ ನಾಪತ್ತೆಯಾದ ಓರ್ವ ಮೀನುಗಾರರ ಕುಟುಂಬಕ್ಕೆ ಮೀನುಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಡಿಸೆಂಬರ್ 3 ರ ಗುರುವಾರ 6 ಲಕ್ಷ ರೂ. ಪರಿಹಾರ ಮೊತ್ತದ ಮಂಜೂರಾತಿ ಪತ್ರ ವಿತರಣೆ ಮಾಡಿದರು.







ಪರಿಹಾರ ಮಂಜೂರಾತಿ ಆದೇಶದ ನಕಲನ್ನು ಸಂತ್ರಸ್ತರ ಕುಟುಂಬ ಸದಸ್ಯರಿಗೆ ಉಪ ಆಯುಕ್ತರ ಕಚೇರಿಯಲ್ಲಿ ಹಸ್ತಾಂತರಿಸಿದ ಪೂಜಾರಿ, ''ಇಲಾಖೆಯಿಂದ, ಕೇವಲ 6 ಲಕ್ಷ ರೂ.ಗಳ ಪರಿಹಾರವನ್ನು ಮಾತ್ರ ಒದಗಿಸುವ ಅವಕಾಶವಿರುವುದರಿಂದ, ಅದನ್ನು ಸಂತ್ರಸ್ತರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತಿದೆ. ಇಂದು ಸರ್ಕಾರಿ ರಜಾದಿನವಾಗಿರುವುದರಿಂದ, ನಾಳೆ (ಡಿಸೆಂಬರ್ 4) ವೇಳೆಗೆ ಪರಿಹಾರವನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ'' ಎಂದು ತಿಳಿಸಿದರು.
''ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸ್ಥಳೀಯ ಶಾಸಕರೊಂದಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದು, ದೋಣಿ ದುರಂತಕ್ಕೆ ಒಳಗಾದ ಪ್ರತಿ ಕುಟುಂಬಕ್ಕೆ 4 ಲಕ್ಷ ರೂ.ಗಳ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಾವಗುವುದು'' ಎಂದು ಹೇಳಿದರು.
"ಮೀನುಗಾರಿಕೆ ಇಲಾಖೆಯಲ್ಲಿ ಲಭ್ಯವಿರುವ ಯಾವುದೇ ಸೌಲಭ್ಯಗಳು ಇದ್ದರೂ, ಅವುಗಳನ್ನು ಸಂತ್ರಸ್ತರ ಕುಟುಂಬ ಸದಸ್ಯರಿಗೆ ಒದಗಿಸಲಾಗುವುದು" ಎಂದು ಸಚಿವರು ಭರವಸೆ ನೀಡಿದರು.
''ಪರ್ಸಿನ್ ಹಡಗು ಸಮುದ್ರದ ಮದ್ಯೆ ಮುಳುಗಿದ ಬಗ್ಗೆ ತನಿಖೆ ನಡೆಸಲು ಹಾಗೂ ಮೀನುಗಾರಿಕೆ ಸಂದರ್ಭ ಮೀನುಗಾರರು ಜೀವ ಉಳಿಸುವ ಜಾಕೆಟ್ಗಳನ್ನು ಕಡ್ಡಾಯವಾಗಿ ಬಳಸುವಂತೆ ಜಾಗೃತಿ ಮೂಡಿಸಲು ಮೀನುಗಾರಿಕೆ ಇಲಾಖೆಯ ನಿರ್ದೇಶಕರಿಗೆ ನಿರ್ದೇಶನ ನೀಡುತ್ತೇನೆ'' ಎಂದು ಪೂಜಾರಿ ಹೇಳಿದರು.
ಈ ಸಂದರ್ಭದಲ್ಲಿ ದುರಂತದಲ್ಲಿ ಕಾಣೆಯಾದ ಮೀನುಗಾರ ಅನ್ಸಾರ್ ಅವರನ್ನು ಹುಡುಕಲು ಬೇಕಾದ ಕ್ರೇನ್ ವ್ಯವಸ್ಥೆ ಮಾಡುವಂತೆ ಸ್ಥಳೀಯ ಕಾರ್ಪೋರೇಟರ್ ಆಡಳಿತವನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೋಟಾ ಪೂಜಾರಿ, ಕಾಣೆಯಾದ ಮೀನುಗಾರನನ್ನು ಪತ್ತೆ ಹಚ್ಚಲು ಅಗತ್ಯ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ (ಡಿಸಿ) ಡಾ.ರಾಜೇಂದ್ರ ಕೆ ವಿ ಅವರಿಗೆ ನಿರ್ದೇಶನ ನೀಡಿದರು.
ಆ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಕರಾವಳಿ ಭದ್ರತಾ ಪೊಲೀಸ್ ಡಿಎಸ್ಪಿ ಗಂಗಿ ರೆಡ್ಡಿ ಮತ್ತು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್ ಸೋಮೇಶ್ವರದಲ್ಲಿ ಕೆಲಸ ಮಾಡುತ್ತಿರುವ ಬಾರ್ಜ್ ಅನ್ನು ನೀರಿನಿಂದ ದೋಣಿ ಮೇಲೆತ್ತಲು ನಿಯೋಜನೆ ಮಾಡುವಂತೆ ತಿಳಿಸಿದರು. ನಾಪತ್ತೆಯಾದ ಮೀನುಗಾರನನ್ನು ಈಜು ತಜ್ಞರು ಹುಡುಕುತ್ತಿದ್ದಾರೆ ಎಂದು ಹೇಳಿದರು.
"ಮುಂದಿನ ದಿನಗಳಲ್ಲಿ, ಆಡಳಿತವು ಮೀನುಗಾರರಿಗೆ ಜೀವ ಸುರಕ್ಷಾ ಜಾಕೆಟ್ಗಳನ್ನು ಬಳಸುವ ಬಗ್ಗೆ ಜಾಗೃತಿ ಮೂಡಿಸುತ್ತದೆ. ಮೀನುಗಾರರಿಗೆ ಮತ್ತು ಅವರ ಕುಟುಂಬಗಳಿಗೆ ಸುರಕ್ಷತೆ ಮತ್ತು ಜೀವ ವಿಮೆಯ ಮಹತ್ವದ ಬಗ್ಗೆಯೂ ಅರಿವು ಮೂಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ದುರಂತದಲ್ಲಿ ಸಾವನ್ನಪ್ಪಿದವರಿಗಾಗಿ ಮೌನ ಪ್ರಾರ್ಥನೆಯನ್ನು ಜಿಲ್ಲಾಡಳಿತ ನಡೆಸಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್ ಉಪಸ್ಥಿತರಿದ್ದರು.