ಮಂಗಳೂರು, ಡಿ.09 (DaijiworldNews/MB) : ನಗರದಲ್ಲಿ ಪ್ರಚೋದನಕಾರಿ ಗೋಡೆ ಬರಹ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಗೋಡ ಬರಹ ಬರೆಯುವಂತೆ ವಿದೇಶದಿಂದ ವ್ಯಕ್ತಿಯೋರ್ವ ನಿರ್ದೇಶನ ನೀಡಿದ್ದಾನೆ ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮೊಹಮ್ಮದ್ ಶಾರಿಕ್ ಈ ಪ್ರಕರಣದ ಪ್ರಮುಖ ಆರೋಪಿ. ಇಂಟರ್ನೆಟ್ ಫೋನ್ ಕರೆ ಮೂಲಕ ಆತನ ಸಂಪರ್ಕ ಮಾಡುತ್ತಿದ್ದ ವ್ಯಕ್ತಿಯು ರಾಜ್ಯವ್ಯಾಪಿ ಗಮನವನ್ನು ಸೆಳೆಯಲು ಹಾಗೂ ಚಳುವಳಿಯನ್ನು ಸೃಷ್ಟಿಸಲು ಈ ರೀತಿಯ ಕಾರ್ಯ ಮಾಡಲು ಪ್ರೋತ್ಸಾಹಿಸಿದನು. ಕರೆ ಮಾಡಿದವರು ಕರಾವಳಿ ಕರ್ನಾಟಕದಲ್ಲಿ ಈ ಕೃತ್ಯ ಮಾಡಬೇಕೆಂದು ಬಯಸಿದ್ದು ಈ ಹಿನ್ನೆಲೆ ಶಾರಿಕ್ ಇಂಟರ್ನೆಟ್ ಮತ್ತು ಯೂಟ್ಯೂಬ್ನಲ್ಲಿ ಜನರ ಗಮನ ಸೆಳೆಯಲು ಯಾವ ಕಾರ್ಯ ಸೂಕ್ತ ಎಂದು ಹುಡುಕಿ ಬಳಿಕ ಗೋಡೆ ಬರಹ ಬರೆಯುವ ತೀರ್ಮಾನ ತೆಗೆದುಕೊಂಡನು. ಈ ಕೃತ್ಯಕ್ಕೆ ನಿರ್ದೇಶನ ನೀಡಿದ ವ್ಯಕ್ತಿ ಹಾಗೂ ಈ ಘಟನೆಯಲ್ಲಿ ಭಾಗಿಯಾದ ಸದಸ್ಯರು ಪುಣೆಯ ವಾಟ್ಸಾಪ್ ಗುಂಪಿನಲ್ಲಿರುವವರು ಎಂದು ಮೂಲಗಳು ಬಹಿರಂಗಪಡಿಸಿವೆ.
ಮೊಹಮ್ಮದ್ ಶಾರಿಕ್ ತೀರ್ಥಹಳ್ಳಿಯಲ್ಲಿ ವಾಸಿಸುತ್ತಿದ್ದರೆ, ಮಾಜ್ ಮುನೀರ್ ಅಹಮದ್ ನಗರದಲ್ಲಿ ವಾಸಿಸುತ್ತಿದ್ದಾನೆ. ಚಟುವಟಿಕೆಯ ಬೆಳವಣಿಗೆಗಳನ್ನು ಗಮನಿಸುವ ಜವಾಬ್ದಾರಿಯನ್ನು ಮಾಜ್ಗೆ ಶಾರೀಕ್ ನೀಡಿದ್ದನು. ಎಂಜಿನಿಯರಿಂಗ್ ವಿದ್ಯಾರ್ಥಿಯಾದ ಮಾಜ್ ಆರಂಭದಲ್ಲಿ ಈ ಜವಾಬ್ದಾರಿ ವಹಿಸುವುದಕ್ಕೆ ಹಿಂಜರಿದಿದ್ದು ಆದರೆ ಆತನನ್ನು ಒತ್ತಾಯಿಸಿ ಶಾರಿಕ್ ತನ್ನ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಆರಂಭದಲ್ಲಿ ಕೋರ್ಟ್ ಸಮೀಪದ ಗೋಡೆಯಲ್ಲಿ ಪ್ರಚೋದನಕಾರಿ ಬರಹವನ್ನು ಬರೆದಿದ್ದ ಅವರು ಈ ಬರಹ ಯಾರ ಗಮನಕ್ಕೂ ಬಾರದ ಕಾರಣ ಬಿಜೈನ ಅಪಾರ್ಟ್ಮೆಂಟ್ ಒಂದರ ಗೋಡೆಯ ಮೇಲೆ ಪ್ರಚೋದನಕಾರಿ ಬರಹವನ್ನು ಬರೆದಿದ್ದಾರೆ.
ಈ ಕೃತ್ಯ ದೊಡ್ಡ ಸುದ್ದಿಯಾದ ಬಳಿಕ ಮಾಜ್ ಆತಂಕಗೊಂಡು ತನ್ನ ಕುಟುಂಬಕ್ಕೆ ಮಾಹಿತಿ ನೀಡಿದನು. ತನ್ನ ಸ್ನೇಹಿತನ ಒತ್ತಡಕ್ಕೆ ಮಣಿದು ಮಾಜ್ಗೈದ ಕೃತ್ಯದಿಂದಾಗಿ ಈಗ ಮಾಜ್ ಜೈಲಿನಲ್ಲಿ ಇರಬೇಕಾಗಿದೆ.
ಶಾರಿಕ್ ಮತ್ತು ಮಾಜ್ನನ್ನು ಪ್ರಶ್ನಿಸಿದ ಸಂದರ್ಭ ಘಟನಾ ಸ್ಥಳದಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದ ಬಗ್ಗೆ ಪೊಲೀಸರಿಗೆ ತಿಳಿದಿದ್ದು ತೀರ್ಥಹಳ್ಳಿಯ ಸದಾತ್ ಎಂಬತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಾರಿಕ್ಗೆ ಈ ಕೃತ್ಯ ಎಸಗಲು ಬೇಕಾದ ಹಣದ ವ್ಯವಸ್ಥೆಯನ್ನು ಸದಾತ್ ಮಾಡಿದ್ದ ಹಾಗೆಯೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಎಂದು ವರದಿಯಾಗಿದೆ.
ಇನ್ನು ಈ ಇಬ್ಬರು ಆರೋಪಿಗಳಿಗೂ ಕೊರೊನಾ ನೆಗೆಟಿವ್ ಆಗಿದ್ದರೂ ಆರೋಗ್ಯ ಇಲಾಖೆಯ ಅಧಿಕೃತ ವರದಿ ದೊರೆಯದ ಹಿನ್ನೆಲೆ ಅವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಾಗಿಲ್ಲ. ಬುಧವಾರ ಮಧ್ಯಾಹ್ನ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ.