ಮಂಗಳೂರು, ಡಿ.10 (DaijiworldNews/HR): ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೆಗಣಿ ಎತ್ತಿದ್ದೇನೆ ಎಂದು ಹೇಳುತ್ತಾರೆ, ಆದರೆ ಸೆಗಣಿ ಎತ್ತಿದ್ದರಿಂದ ಏನೂ ಆಗುವುದಿಲ್ಲ, ಗೋವಿನ ಆರಾಧನೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.


ಈ ಕುರಿತು ಗೋಹತ್ಯೆ ನಿಷೇಧ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದ ಹಿನ್ನಲೆಯಲ್ಲಿ ಮಂಗಳೂರಿನ ಬಿಜೆಪಿ ಕಚೇರಿ ಮುಂಭಾಗ ಗೋ ಪೂಜೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ಹಾಗಾಗಿ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧದ ಮಸೂದೆ ಮಂಡನೆ ಮಾಡಿದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.
ಇನ್ನು "ಕಾಂಗ್ರೆಸ್ ಈ ಹಿಂದೆ ಮಸೂದೆ ತೆಗೆಯುವಾಗ ಚರ್ಚೆ ಯಾಕೆ ಮಾಡಿಲ್ಲ, ಈಗ ಚರ್ಚೆ ಬೇಕು ಎನ್ನುವುದು ಕಾಂಗ್ರೆಸ್ ನ ತುಷ್ಠೀಕರಣ ನೀತಿ. ಈ ಹಿಂದೆ ತಲ್ವಾರ್ ಹಿಡಿದು ಗೋ ಕಳ್ಳತನ ಮಾಡಿದವರ ಬಂಧನ ಮಾಡಿಲ್ಲ. ಕಾಂಗ್ರೆಸ್ ಗೋ ಹತ್ಯೆಕೋರರ ಪರವಾಗಿದೆ. ಕಾಂಗ್ರೆಸ್ ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಹೇಳಿದ್ದಾರೆ".