ಮಂಗಳೂರು, ಡಿ.13 (DaijiworldNews/PY): "ಮಂಗಳೂರು ನಗರದ ನದಿ ಹಾಗೂ ಕಡಲ ದಂಡೆಯಲ್ಲಿರುವ ಬೆಂಗ್ರೆ ಗ್ರಾಮದಲ್ಲಿ ಜನರನ್ನು ಕತ್ತಲಲ್ಲಿಟ್ಟು ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ ಏಕಾಏಕಿ ಶಿಲನ್ಯಾಸ ನಡೆಸಲು ಸರಕಾರ ಮುಂದಾಗಿದೆ. ಇದರಿಂದ ಸ್ಥಳೀಯ ಜನತೆ ಆತಂಕಕ್ಕೆ ಒಳಗಾಗಿದ್ದು ಜಿಲ್ಲಾಡಳಿತ ತಕ್ಷಣವೇ ಗ್ರಾಮಸ್ಥರ ಸಭೆ ಕರೆದು ಪೂರ್ಣ ಮಾಹಿತಿ ನೀಡಿ ಸಾಧಕ, ಬಾಧಕಗಳ ಕುರಿತು ಚರ್ಚಿಸಬೇಕು" ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಈ ಬಗ್ಗೆ ಮಾತನಾಡಿದ ಡಿವೈಎಫ್ಐ ದ ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅವರು, "ಬೆಂಗ್ರೆ ಗ್ರಾಮದಲ್ಲಿ ಸಾವಿರಾರು ಮನೆಗಳಿದ್ದು, ಜನ ನಿಬಿಡತೆಯಿಂದ ಕೂಡಿದೆ. ಮೀನುಗಾರಿಕೆಗೆ ಸಂಬಂಧಿಸಿದ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಬಡವರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ತಲೆಮಾರುಗಳಿಂದ ಇಲ್ಲಿ ವಾಸ ಇದ್ದರೂ ಇಲ್ಲಿಯವರಗೆ ಕುಡಿಯುವ ನೀರು, ಒಳಚರಂಡಿ, ಆರೋಗ್ಯ, ಸಾರಿಗೆ ಮುಂತಾದ ಮೂಲಭೂತ ಸೌಲಭ್ಯಗಳಿಂದ ಇಲ್ಲಿನ ಜನತೆ ವಂಚಿತರಾಗಿದ್ದಾರೆ. ಸಿಆರ್ಝಡ್ ಕಾಯ್ದೆಯ ನೆಪವನ್ನು ಮುಂದಿಟ್ಟು ಗ್ರಾಮಸ್ಥರನ್ನು ಸದಾ ಅತಂತ್ರವಾಗಿಯೇ ಇರಿಸಲಾಗಿದೆ. ಈಗ ಇಲ್ಲಿನ ನಿಬಿಡ ಜನ ವಸತಿ ಪ್ರದೇಶಕ್ಕೆ ತಾಗಿಕೊಂಡೇ 100 ಕೋಟಿ ವೆಚ್ಚದಲ್ಲಿ ಕೋಸ್ಟಲ್ ಬರ್ತ್ ನಿರ್ಮಾಣ, ಕ್ಯಾಪಿಟಲ್ ಡ್ರೆಜಿಂಗ್ ಕಾಮಗಾರಿ ಆರಂಭಗೊಳ್ಳುತ್ತಿದೆ. ಸ್ಥಳೀಯ ಗ್ರಾಮಸ್ಥರಿಗೆ ಯಾವ ಮಾಹಿತಿಯನ್ನು ನೀಡದೆ ಏಕಾಏಕಿ ಶಿಲನ್ಯಾಸ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಇದು ಖಂಡನೀಯ" ಎಂದಿದ್ದಾರೆ.
"ಈಗ ಗುರುತಿಸಲಾದ ಜಾಗದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳು, ಸ್ಥಳೀಯ ಮೀನುಗಾರರು ಮೀನು ಒಣಗಿಸುವ ಏಳೆಂಟು ಟೆಂಟ್ಗಳು ಇವೆ. ಸ್ಥಳೀಯ ಸರಕಾರಿ ಪ್ರೌಢ ಶಾಲೆಯ ಅರ್ಧಕ್ಕೂ ಹೆಚ್ಚು ಜಮೀನು ಈಗ ಗುರುತಿಸಲಾದ ನಕ್ಷೆಯ ಒಳಗಡೆ ಸೇರಿಕೊಂಡಿದೆ. ಸ್ಥಳೀಯರಿಗೆ, ಯೋಜನೆಯಿಂದ ಸಂತ್ರಸ್ಥರಾಗುವವರಿಗೆ ಯಾವುದೆ ಮಾಹಿತಿ ನೀಡದೆ ಇಂತಹ ಯೋಜನೆಯ ನಿರ್ಮಾಣಕ್ಕೆ ಮುಂದಾಗಿರುವುದು ಸ್ಥಳೀಯರಲ್ಲಿ ಆತಂಕ, ಭೀತಿಗೆ ಕಾರಣವಾಗಿದೆ" ಎಂದಿದೆ.
"ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಅವರು ಇಂತಹ ಸಂದರ್ಭದಲ್ಲಿ ಜನರ ಜೊತೆಗೆ ನಿಲ್ಲದೆ, ಅವರನ್ನು ಕತ್ತಲೆಯಲ್ಲಿಟ್ಟು ಅಭಿವೃದ್ದಿಯ ಹೆಸರಿನಲ್ಲಿ ಎಲ್ಲವನ್ನು ನಿಗೂಢವಾಗಿ ನಡೆಸಲು ಮುಂದಾಗಿರುವುದು ಅವರ ಜನವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಯೊಂದು ನಡೆದುಕೊಳ್ಳುವ ವಿಧಾನ ಅಲ್ಲ. ಜಿಲ್ಲಾಡಳಿತ ತಕ್ಷಣವೇ ಗ್ರಾಮಸ್ಥರ ಸಭೆ ಕರೆದು, ಪೂರ್ಣ ಮಾಹಿತಿ ನೀಡಿ, ಅವರ ಆಕ್ಷೇಪಗಳನ್ನು ಪರಿಗಣಿಸಬೇಕು, ಸಮಸ್ಯೆಗಳನ್ನು ಬಗೆ ಹರಿಸಿ ಮುಂದುವರಿಯಬೇಕು" ಎಂದು ಆರೋಪಿಸಿದೆ.