ಬ್ರಹ್ಮಾವರ, ಡಿ.20 (DaijiworldNews/PY): ತನ್ನ ಮೂವರು ಮಕ್ಕಳೊಂದಿಗೆ ತವರು ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಪತಿಯ ಮನೆಯಿಂದ ಹೊರಟ ಮಹಿಳೆಯು ಮೂವರು ಮಕ್ಕಳ ಸಹಿತ ನಾಪತ್ತೆಯಾದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ಬ್ರಹ್ಮಾವರ ತಾಲೂಕಿನ ಬಕ್ಕಪಟ್ಟಣದ ಮೊಹಮ್ಮದ್ ಖಲೀಲ್ ಅವರ ಪತ್ನಿ ರಾಸಿಯಾ (32), ಪುತ್ರಿಯರಾದ ಪಾತಿಮಾ ನಶ್ರಾ (11), ಆಯಿಷಾ ಝಿಫ್ರಾ (3) ಹಾಗೂ ಪುತ್ರ ಅಬ್ದುಲ್ ಮುತ್ತಾಹೀರ್ (7) ಎಂದು ತಿಳಿದುಬಂದಿದೆ.
ಮೊಹಮ್ಮದ್ ಖಲೀಲ್ ಅವರು ತಮ್ಮ ಪತ್ನಿ ರಾಸಿಯಾ ಹಾಗೂ ಪುತ್ರಿಯರಾದ ಪಾತಿಮಾ ನಶ್ರಾ, ಆಯಿಷಾ ಝಿಫ್ರಾ, ಪುತ್ರ ಅಬ್ದುಲ್ ಮುತ್ತಾಹೀರ್ನೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಡಿ.18ರ ಶುಕ್ರವಾರದಂದು ಬೆಳಗ್ಗೆ 9.30ರ ಸುಮಾರಿಗೆ ಖಲೀಲ್ ಅವರ ಪತ್ನಿ ತನ್ನ ಮೂರು ಮಕ್ಕಳೊಂದಿಗೆ ತನ್ನ ತವರು ಮನೆಯಾದ ಕುಂದಾಪುರದ ಕಂಡ್ಲೂರಿಗೆ ಹೋಗುವುದಾಗಿ ಹೇಳಿ ಆಟೋ ರಿಕ್ಷಾದಲ್ಲಿ ಬ್ರಹ್ಮಾವರ ಬಸ್ ನಿಲ್ದಾಣಕ್ಕೆ ಹೋಗಿದ್ದಾರೆ. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಖಲೀಲ್ ಅವರು ಪತ್ನಿಯ ಮೊಬೈಲ್ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಬಳಿಕ ಖಲೀಲ್ ಅವರು ಪತ್ನಿಯ ತಂದೆಗೆ ಕರೆ ಮಾಡಿ ಕೇಳಿದ್ದಾರೆ. ಈ ವೇಳೆ ಅವರು ರಾಸಿಯಾ ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆ.
ಬಳಿಕ ಖಲೀಲ್ ಅವರು ತಮ್ಮ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ್ದು, ಅಲ್ಲಿ ಕೂಡಾ ಪತ್ತೆಯಾಗಿಲ್ಲ.
ಈ ಬಗ್ಗೆ ಖಲೀಲ್ ಅವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.