ಮಂಗಳೂರು, ಡಿ.21 (DaijiworldNews/PY): ಮಂಗಳೂರಿನ ರಥಬೀದಿಯ ಬಳಿಯ ನ್ಯೂ ಚಿತ್ರ ಟಾಕೀಸ್ ಮುಂಭಾಗದಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೆಬಲ್ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕುದ್ರೋಳಿ ನಿವಾಸಿ ಮಹಮ್ಮದ್ ನವಾಝ್ (30) ಹಾಗೂ 16 ವರ್ಷದ ಬಾಲಕ ಎಂದು ತಿಳಿದುಬಂದಿದೆ. ನವಾಝ್ಗೆ ಡಿ.24ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಬಾಲಕನನ್ನು ಉಡುಪಿಯ ನಿಟ್ಟೂರಿನ ಬಾಲಮಂದಿರಕ್ಕೆ ರವಾನೆ ಮಾಡಲಾಗಿದೆ.
2019ರ ಡಿ.19ರಂದು ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ನೌಶೀನ್ನ ಸಂಬಂಧಿ ನವಾಝ್ ಎಂದು ತಿಳಿದುಬಂದಿದೆ. ಈ ಘಟನೆಯ ಪ್ರತಿಕಾರವಾಗಿ ಈತ ಪೊಲೀಸ್ ಮೇಲೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ನ್ಯೂ ಚಿತ್ರ ಜಂಕ್ಷನ್ ಬಳಿ ಬಂದರು ಠಾಣೆಯ ಹೆಡ್ ಕಾನ್ಸ್ಟೇಬಲ್ ಗಣೇಶ್ ಕಾಮತ್ ಹಾಗೂ ಇಬ್ಬರು ಮಹಿಳಾ ಕಾನ್ಸ್ಟೆಬಲ್ಗಳು ವಾಹನಗಳನ್ನು ಪರಿಶೀಲಿಸುತ್ತಿದ್ದಾಗ ಸ್ಕೂಟರ್ನ ಸಹಸವಾರ ಗಣೇಶ್ ಕಾಮತ್ ಅವರ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದ.