ಕಾಸರಗೋಡು, ಡಿ.21 (DaijiworldNews/HR): ಮಂಜೇಶ್ವರ ಸಮುದ್ರದಲ್ಲಿ ಬೋಟಿನ ಮೂಲಕ ಬಂದ ತಂಡವೊಂದು ಇಬ್ಬರು ಪೊಲೀಸರನ್ನು ಅಪಹರಿಸಿ ಬಳಿಕ ಮಂಗಳೂರು ಬಂದರಿನಲ್ಲಿ ಇಳಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಸಾಂಧರ್ಭಿಕ ಚಿತ್ರ
ಕುಂಬಳೆ ಶಿರಿಯದಲ್ಲಿರುವ ಕರಾವಳಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಕೆ.ವಿ ರಾಜೀವ್ ಕುಮಾರ್ ನೇತೃತ್ವದ ತಂಡವು ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಂಜೇಶ್ವರ ಸಮುದ್ರದಲ್ಲಿ ಕರ್ನಾಟಕ ನೋಂದಾವಣೆಯ ಬೋಟ್ನ ದಾಖಲೆಗಳನ್ನು ತಪಾಸಣೆ ನಡೆಸಿದ್ದು, ಕೆಲ ಸಂಶಯ ಉಂಟಾದ ಹಿನ್ನಲೆಯಲ್ಲಿ ಪೊಲೀಸರು ಬೋಟ್ನ್ನು ವಶಕ್ಕೆ ಪಡೆದುಕೊಂಡಿದ್ದರು.
ಬೋಟ್ನಲ್ಲಿ 12 ಮಂದಿ ಇದ್ದು, ಬಳಿಕ ಬೋಟನ್ನು ಮಂಜೇಶ್ವರ ಬಂದರಿಗೆ ತಲಪಿಸಲು ಸೂಚನೆ ನೀಡಿದ್ದು, ಈ ಬೋಟ್ಗೆ ರಘು ಮತ್ತು ಸುಧೀಶ್ ಎಂಬ ಪೊಲೀಸರನ್ನು ಹತ್ತಿಸಲಾಗಿತ್ತು. ಸಬ್ ಇನ್ಸ್ ಪೆಕ್ಟರ್ ಕೆ.ವಿ ರಾಜೀವ್ ಕುಮಾರ್ ಹಾಗೂ ಇತರ ಪೊಲೀಸರು ಅಲ್ಲಿಂದ ಮಂಜೇಶ್ವರ ಬಂದರಿಗೆ ತಲಪಿ ಗಂಟೆಗಳಾದರೂ ವಶಕ್ಕೆ ತೆಗೆದುಕೊಂಡ ಬೋಟ್ ತಲುಪದೆ ಇದ್ದುದರಿಂದ ಬೋಟ್ನಲ್ಲಿದ್ದ ಪೊಲೀಸರನ್ನು ಸಂಪರ್ಕಿಸಿದಾಗ ಬೋಟ್ ವೇಗವಾಗಿ ಇನ್ನೊಂದು ಕಡೆಗೆ ತೆರಳುತ್ತಿರುವ ಮಾಹಿತಿ ಲಭಿಸಿತ್ತು. ಕೂಡಲೇ ಕಾಸರಗೋಡಿನ ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರು ಪೊಲೀಸರನ್ನು ಸಂಪರ್ಕಿಸಿದಾಗ ಬೋಟ್ ಮಂಗಳೂರು ಬಂದರು ತಲಪಿದ್ದು, ಇಬ್ಬರು ಪೊಲೀಸರು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂತು.
ಬೋಟ್ನಲ್ಲಿ ಅಗತ್ಯ ದಾಖಲೆ ಇಲ್ಲದಿರುವುದರಿಂದ ವಶಕ್ಕೆ ಪಡೆಯಲಾಗಿತ್ತು ಎಂದು ಕರಾವಳಿ ಪೊಲೀಸರು ತಿಳಿಸಿದ್ದಾರೆ.