ಬೆಳ್ತಂಗಡಿ, ಡಿ.24 (DaijiworldNews/MB) : ಅಪಹರಣಕೊಳಗಾಗಿದ್ದ ಉಜಿರೆಯ ಬಾಲಕನ ತಂದೆ ಬಿಜಾಯ್ ತನ್ನ ವ್ಯವಹಾರದಲ್ಲಿ ಯಾರಿಗೂ ಹಣ ಬಾಕಿಯಿಲ್ಲ ಎಂದು ಸ್ಪಷ್ಟಪಡಿಸಿದರು. ಹಾಗೆಯೇ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಹರಡದಂತೆ ಮಾಧ್ಯಮಕ್ಕೆ ಮನವಿ ಮಾಡಿದರು.

ಡಿಸೆಂಬರ್ 23 ರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜಾಯ್, "ನಾನು ಕೋಟ್ಯಾಂತರ ರೂಪಾಯಿ ಸಾಲವನ್ನು ಪಾವತಿಸಬೇಕಾಗಿದೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಹರಡುತ್ತಿದೆ. ನಾನು ಯಾರಿಗಾದರೂ ಹಣ ನೀಡಲು ಬಾಕಿಯಿದೆ ಎಂದು ಅವರು ಸಾಕ್ಷಿ ಸಮೇತ ಪೊಲೀಸರಿಗೆ ಸಾಬೀತುಪಡಿಸಿದರೆ ನಾನು ಮೊತ್ತವನ್ನು ಅವರಿಗೆ ನೀಡಲು ಸಿದ್ದನಿದ್ದೇನೆ'' ಎಂದು ತಿಳಿಸಿದರು.
ಬಿಟ್ಕಾಯಿನ್ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ ಬಿಜಾಯ್, "2016 ರಲ್ಲಿ ಬಿಟ್ಕಾಯಿನ್ ಕಾನೂನು ಬಾಹಿರವಾಗಿರಲಿಲ್ಲ. ಆ ಸಮಯದಲ್ಲಿ ನಾನು ಕೆಲವು ಬಿಟ್ಕಾಯಿನ್ ವಹಿವಾಟುಗಳನ್ನು ಸಹ ಮಾಡಿದ್ದೇನೆ. ಆದರೆ 2017 ರಲ್ಲಿ ನಿಷೇಧಿಸಿದ ನಂತರ, ನಾನು ಬಿಟ್ಕಾಯಿನ್ ವ್ಯವಹಾರ ಮಾಡುತ್ತಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
"ನನ್ನ ಮಗ ಅನುಭವ್ನನ್ನು ಅಪಹರಿಸಿದ ಯಾರನ್ನೂ ನಾನು ಈ ಹಿಂದೆ ಕಂಡಿಲ್ಲ. ಮುಖ್ಯ ಆರೋಪಿಯನ್ನು ಕಂಡಾಗ ಮಾತ್ರ ನಾನು ಆತನ ಪರಿಚಯವಿದೆಯೇ ಎಂದು ದೃಢಪಡಿಸಬಹುದು" ಎಂದು ಬಿಜಾಯ್ ಹೇಳಿದರು.
ಇನ್ನು ಈ ಬಗ್ಗೆ ಮಾತನಾಡಿರುವ ಬಾಲಕನ ಅಜ್ಜ ಶಿವನ್ ಮತ್ತು ತಾಯಿ ಸರಿತಾ, "ದೇವರ ದಯೆಯಿಂದ ನಾವು ನಮ್ಮ ಮಗನನ್ನು ಸುರಕ್ಷಿತವಾಗಿ ಮರಳಿ ಪಡೆದುಕೊಂಡಿದ್ದೇವೆ. ಪೊಲೀಸ್ ಇಲಾಖೆ, ಮಾಧ್ಯಮ, ಸ್ಥಳೀಯರು, ಶಾಸಕರು, ಸಂಸದರು ಮತ್ತು ಸಚಿವರ ಸಹಕಾರಕ್ಕಾಗಿ ನಾವು ಪ್ರಾಮಾಣಿಕವಾಗಿ ಧನ್ಯವಾದ ಅರ್ಪಿಸುತ್ತೇವೆ. ನಾವೂ ಈಗಲೂ ಆತಂಕಕ್ಕೆ ಒಳಗಾಗಿದ್ದೇವೆ. ನಮಗೆ ಈಗ ನಮ್ಮ ವರಾಂಡದಲ್ಲೂ ನಮ್ಮ ಮಗುವಿಗೆ ಒಬ್ಬಂಟಿಯಾಗಿ ಆಟವಾಡಲು ಅವಕಾಶ ನೀಡುವ ಧೈರ್ಯವಿಲ್ಲ" ಎಂದು ಹೇಳಿದರು.