ಮಂಗಳೂರು, ಡಿ. 29 (DaijiworldNews/MB) : ರೂಪಾಂತರಿ ಕೊರೊನಾ ವೈರಸ್ನ ಆತಂಕದಿಂದಾಗಿ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿರುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಗಳ ಹಲವಾರು ಜನರು ವಿದೇಶದಲ್ಲಿ ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಸ್ತುತ, ದುಬೈ, ಕತಾರ್ ಮತ್ತು ಬಹ್ರೇನ್ಗೆ ತೆರಳುವ ವಿಮಾನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಸೌದಿ ಅರೇಬಿಯಾ ಮತ್ತು ಇತರ ದೇಶಗಳಲ್ಲಿರುವ ಕನ್ನಡಿಗರು ತುರ್ತು ಪರಿಸ್ಥಿತಿ ಇದ್ದರೂ ಕೂಡಾ ತಮ್ಮ ತವರಿಗೆ ಮರಳಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ.

ಎನ್ಆರ್ಐ ಫಾರಂನ ಕರ್ನಾಟಕದ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ ಅವರು ಕನ್ನಡದ ದಿನಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಸೌದಿ ಅರೇಬಿಯಾ ಮತ್ತು ಇತರ ದೇಶಗಳಿಗೆ ವಿಮಾನಗಳಿಲ್ಲದ ಕಾರಣ ಭಾರತಕ್ಕೆ ಮರಳಲು ಅಥವಾ ತಮ್ಮ ಕೆಲಸಕ್ಕೆ ಹಿಂತಿರುಗಲು ಕಷ್ಟಪಡುತ್ತಿರುವ ಹಲವಾರು ಜನರ ಬಗ್ಗೆ ಮಾಹಿತಿ ಲಭಿಸಿದೆ ಎಂದು ತಿಳಿಸಿದ್ದಾರೆ.
ಕೆಲವು ವಾರಗಳ ಹಿಂದೆ ಸೌದಿ ಅರೇಬಿಯಾಕ್ಕೆ ವಿಮಾನಗಳನ್ನು ಸ್ಥಗಿತಗೊಳಿಸಲಾಗಿತ್ತು. ವೃತ್ತಿ ವೀಸಾಗಳನ್ನು ಹೊಂದಿದ್ದ ಹಲವು ಮಂದಿ ಯುಎಇಗೆ ತೆರಳಿ ಅಲ್ಲಿ 14 ದಿನ ಕ್ವಾರಂಟೈನ್ಗೆ ಒಳಪಟ್ಟು ಅಲ್ಲಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುತ್ತಿದ್ದರು. ಆದರೆ ಈಗ ಸೌದಿಗೆ ವಿಮಾನ ಸ್ಥಗಿತವಾದ ಕಾರಣ ಯುಎಇಯಲ್ಲಿರುವವರು ಸೌದಿಗೆ ಪ್ರಯಾಣ ಮಾಡಲಾಗದೆ ಯುಎಇಯ ಹೊಟೇಲ್ಗಳಲ್ಲೇ ಉಳಿಯಬೇಕಾಗಿದೆ ಎಂದು ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರು ಹೇಳಿದ್ದಾರೆ.
ಪ್ರಸ್ತುತ, ಮಂಗಳೂರಿನಿಂದ 'ವಂದೇ ಭಾರತ್' ಮಿಷನ್ ಅಡಿ ದುಬೈಗೆ ಏರ್ ಇಂಡಿಯಾ ವಿಮಾನಗಳು ಪ್ರತಿದಿನವೂ ಕಾರ್ಯನಿರ್ವಹಿಸುತ್ತಿದೆ. ಸ್ಪೈಸ್ ಜೆಟ್ ಮತ್ತು ಇಂಡಿಗೊ ಕೂಡ ಕೆಲವು ದಿನಗಳಿಂದ ದುಬೈಗೆ ಸಂಚರಿಸುತ್ತಿದೆ. ಆದರೆ ಇತ್ತೀಚಿನ ಕೆಲವು ಬೆಳವಣಿಗೆಗಳ ಹಿನ್ನೆಲೆ ಈ ವಿಮಾನಗಳು ಯಾವುದೇ ಸಮಯದಲ್ಲಿ ಸ್ಥಗಿತಗೊಳ್ಳಬಹುದೆಂಬ ಆತಂಕವಿದೆ.