ಮೂಡುಬಿದಿರೆ, ಡಿ. 30 (DaijiworldNews/MB) : ''ನಾವು ಯಾವಾಗ ಸಹಬಾಳ್ವೆಯನ್ನು ಮರೆತು ಜೀವಿಸಲು ಆರಂಭಿಸುತ್ತವೆಯೋ ಅಂದು ಪರಿಸರದ ಜತೆಗೆ ನಮ್ಮ ಸ್ಪರ್ಧೆ ಪ್ರಾರಂಭವಾಗುತ್ತದೆ. ಆ ಸ್ಪರ್ಧೆಯಲ್ಲಿ ನಮ್ಮ ಸೋಲು ಖಚಿತವಾಗಿರುತ್ತದೆ'' ಎಂದು ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು.



ಆಳ್ವಾಸ್ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಆಯೋಜಿಸಲ್ಪಟ್ಟ ರಾಷ್ಟ್ರಮಟ್ಟದ ಕಿರುಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತಾನಾಡಿದರು.
ಕೊರೊನಾ ಒಂದು ವೈರಸ್ ಇದರಿಂದ ಹೊರಬರುವ ಮಾರ್ಗಗಳು ನಮಗೆ ಇಗಾಗಲೇ ತಿಳಿದಿದೆ, ಆದರೆ ಜಗತ್ತು ಮಾರ್ಚ್ ತಿಂಗಳನಲ್ಲೆ ಉಳಿದುಬಿಟ್ಟಿದೆ. ಪ್ರಸ್ತುತ ಪರಿಸ್ಥಿತಿ ಬದಲಾಗಿದೆ ಇದನ್ನು ನಾವೆಲ್ಲರೂ ಅರಿತು ನಮ್ಮ ಸುತ್ತಮುತ್ತಲಿನವರನ್ನು ಜಾಗೃತಗೊಳಿಸಬೇಕು. ಸಿನಿಮಾ ನೋಡಬೇಕು ಆದರೆ ಸಿನಿಮಾದಲ್ಲಿ ನಮ್ಮನ್ನು ನಾವು ನೋಡಬಾರದು ಆದರೆ ಇಂದಿನ ಯುವಪೀಳಿಗೆ ಸಿನಿಮಾ ಪಾತ್ರಗಳಲ್ಲಿ ತಮ್ಮನ್ನು ತಾವು ಕಂಡುಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು. ಸಿನಿಮಾ ಮನುಷ್ಯನ ಜೀವನದ ಒಂದು ಭಾಗವಾಗಿರಬೇಕೇ ಹೊರತು ಅದೇ ಜೀವನವಾಗಿರಬಾರದು. ಪ್ರಸ್ತುತ ಜಗತ್ತಿನಲ್ಲಿ ನಿಜವಾದ ಸಿನಿಮಾದಲ್ಲಿ ಕೃಷಿಕರಂತೆನಟಿಸುವ ನಟರಿಗೆ ಇರುವ ಗೌರವ ನಿಜವಾದ ಕೃಷಿಕರಿಗೆ ಸಿಗದೇ ಇರುವುದು ವಿಷಾದಕರ. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ ಉದಾತ್ತವಾದ ಜೀವನ ಮಾದರಿಯನ್ನು ನಮ್ಮದಾಗಿಸಿಕೊಂಡಾಗ ಯಶಸ್ವಿ ಬದುಕನ್ನು ಕಟ್ಟಿಕೊಳ್ಳಬಹುದು ಎಂದರು.
ಲಾಕ್ಡೌನ್ ಸಮಯಲ್ಲಿ ೧೫೦ಕ್ಕೂ ಹೆಚ್ಚು ಮನೆಗಳಿಗೆ ತಾವು ಮನೆಯನ್ನು ನಿರ್ಮಿಸಲು ಕೂಡಿಟ್ಟ ಸುಮಾರು ರೂ೩೦೦೦೦ ಹಣದಿಂದ ೭೫೦ ಕೆಜಿ ಅಕ್ಕಿಯನ್ನು ವಿತರಿಸಿದ್ದ ಮಲ್ಪೆಯ ಮೀನು ವ್ಯಾಪಾರಿ ಹಾಗೂ ಕೋವಿಡ್ ವಾರಿಯರ್ ಶಾರದಕ್ಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇವರ ಉದಾತ್ತ ಕರ್ಯವನ್ನು ಗುರುತಿಸಿ ಆಳ್ವಾಸ್ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪದವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದವತಿಯಿಂದ ಸನ್ಮಾನ ಮಾಡಲಾಯಿತು.
ರಾಷ್ಟ್ರಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ಮೈಲಿಗಲ್ಲು ನಿರ್ಮಾಣದ ಸುಶಾಂತ್ ಮುಗರವಳ್ಳಿ ನಿರ್ದೇಶನದ "ಪರಿತ್ಯಕ್ತೆ" ಕಿರು ಚಿತ್ರವು ಪ್ರಥಮ ಬಹುಮಾನ ರೂ 10,111 ಪಡೆದುಕೊಂಡಿತು. ಶಾಂಭವಿ ಕಲಾವಿದರು ಸಾಣೂರು ನಿರ್ಮಾಣದ ಅಶೋಕ್ ಪೂಜಾರಿ ಸಾಣೂರು ನಿರ್ದೇಶನದ "ಉಸಿರು" ಸಿನಿಮಾ ರೂ 6666 ಮೊತ್ತದೊಂದಿಗೆ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು. ವಿಶಿಷ್ಟ ಬಹುಮಾನಗಳ ವಿಭಾಗದಲ್ಲಿ ಉತ್ತಮ ನಟನೆ ಸ್ಪಟಿಕ ಮತ್ತು ಪ್ಯಾಂಡಮಿಕ್ ಪಾರು ಕಿರು ಚಿತ್ರ ಪಡೆದುಕೊಂಡಿತು. ಉತ್ತಮ ಸಂಕಲನ ಬಹುಮಾನ "ಸವಿ" ಕಿರುಚಿತ್ರ ಪಡೆದುಕೊಂಡಿತು. ಉತ್ತಮ ನಿರ್ದೇಶನ ಪ್ರಶಸ್ತಿ ಭುಜಂಗನ ಕಥೆ ಪಡೆದುಕೊಂಡರೆ, ಉತ್ತಮ ಛಾಯಾಗ್ರಹಣ ಪ್ರಶಸ್ತಿ ಕಾಡುಮನುಷ್ಯ ಚಿತ್ರ ಪಡೆದುಕೊಂಡಿತು.
ಆಳ್ವಾಸ್ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ್ ಕೆಜಿ ಮತ್ತು ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕರಾದ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಕಾರ್ತಿಕ್ ರಾಯ್ಕರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಶ್ರೀಗೌರಿ ಜೋಷಿ ಬಹುಮಾನ ವಿತರಣಾ ಸಮಾರಂಭ ನಡೆಸಿ ಕೊಟ್ಟರು.
ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾದ್ಯಾಪಕಿ ಡಾ ಸಫಿಯಾ ತೀರ್ಪುಗಾರರು ಕಳುಹಿಸಿದ್ದ ಶುಭಾಶಯವನ್ನು ವಾಚಿಸಿದರು. ಸಹಾಯಕ ಪ್ರಾದ್ಯಪಕ ಡಾ ಶ್ರೀನಿವಾಸ ಹೊಡೆಯಾಲ ವಂದಿಸಿದರು. ಆಳ್ವಾಸ್ ಕಾಲೇಜಿನ ಕಾಮಾರ್ಸ ಪ್ರೋಪೆಶನಲ್ ವಿಭಾಗ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿತ್ತು.